
ಬಂಟ್ವಾಳ :ಕಳೆದ 20 ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕಲಾವಿದ ಮನೋಜ್ ಕನಪಾಡಿ ಇವರಿಗೆ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಇವರು ಬಾಲ್ಯದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು ಇದಕ್ಕೆ ಪೂರಕವಾಗಿ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲೊಮೋ ಪದವಿ ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದ ಅವರು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕ್ರಮೇಣ ಜನರಿಗೆ ಆಕರ್ಷಣೆಯಾಗುವ ಮತ್ತು ಹೆಚ್ಚು ಬಾಳಿಕೆ ಬರುವ ಫೈಬರ್ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿ ಬ್ರಹ್ಮರಕೊಟ್ಲುವಿನಲ್ಲಿ ಕುಕ್ಕೆಶ್ರೀ ಕಲಾಕೇಂದ್ರದಲ್ಲಿ ಜನರ ಬೇಡಿಕೆ ಅನುಗುಣವಾದ ಫೈಬರ್ ಮೂರ್ತಿ ಸಿದ್ದಪಡಿಸಿ ಮಾರಾಟ ಮಾಡುವ ಮೂಲಕ ಪ್ರವೃತ್ತಿಯನ್ನು ವೃತ್ತಿಯಾಗಿಸಿದರು. ಇವರ ಕುಕ್ಕೆಶ್ರೀ ಕಲಾ ಕೇಂದ್ರದಲ್ಲಿ ವಿವಿಧ ರೀತಿಯ ಹತ್ತು ಹಲವು ಕಲಾಕೃತಿಗಳನ್ನು ಕಾಣಬಹುದು. ಇವರ ಕಲಾಕೃತಿ ರಚನೆಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿದ್ದಲ್ಲದೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಆಕರ್ಷಕ, ವಿಶಿಷ್ಟ,ವಿನೂತನ ಶೈಲಿಯ ಕಲಾಕೃತಿ ತಯಾರಿಯಲ್ಲಿ ಪರಿಣತಿ ಪಡೆದ ಇವರು ಈಗಾಗಲೇ ಛತ್ರಪತಿ ಶಿವಾಜಿ, ಈಶ್ವರ, ಕತ್ತೆತ್ತಿ ನೋಡುವ ಜಿರಾಫೆ, ಯಕ್ಷಗಾನ ಶೈಲಿ ಗೊಂಬೆ, ಕಂಬಳ ಕೋಣ, ಎತ್ತು ಉಳುಮೆ ಮಾಡುವ ರೈತ, ಗೀತೋಪದೇಶ, ಪ್ರಾಣಿ, ಪಕ್ಷಿ ಸೇರಿದಂತೆ ನೂರಾರು ಸ್ತಬ್ಧ ಚಿತ್ರ ರಚಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಮನೋಜ್ ಅವರ ಕೈಚಳಕದಲ್ಲಿ ವಿವಿಧ ರಸ್ತೆಗಳು ಸರ್ಕಲ್ಗಳಿಗೆ ಮೂರ್ತಿ, ರೆಸಾರ್ಟ್, ಗಾರ್ಡನ್, ಹೊಟೇಲ್ ಗಳಿಗೆ ವಿಗ್ರಹ ತಯಾರಿಸುತ್ತಾರೆ.
