
ಬಂಟ್ವಾಳ: ಪಂಜಿಕಲ್ಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಡಾಮಾರು ತಯಾರಿ ಘಟಕದ ವಿರುದ್ಧ ಹೋರಾಟ ಸಮಿತಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಾಲತಿ ಅವರ ಕುರಿತು ಗ್ರಾ.ಪಂ.ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ದೌರ್ಜನ್ಯ ನಡೆಸಿದ್ದಾರೆ ಆರೋಪಿಸಿ ಶುಕ್ರವಾರ ಪಂಜಿಕಲ್ಲು ಗ್ರಾ.ಪಂ.ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್ ಮಾತನಾಡಿ, ಪಂಜಿಕಲ್ಲಿನಲ್ಲಿ ಡಾಮಾರು ಘಟಕ ಅನುಷ್ಠಾನವಾದರೆ ಸ್ಥಳೀಯ ಮನೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆಯಲ್ಲಿ ಸದಸ್ಯೆ ಮಾಲತಿ ಅವರನ್ನು ಪಾಲ್ಗೊಂಡಿದ್ದರು. ಹಿಂದಿನ ಪಿಡಿಒ ಅವರೇ ಘಟಕಕ್ಕೆ ಅನುಮತಿ ನೀಡಿದ್ದು, ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ನಿರ್ಣಯವನ್ನು ತಿದ್ದಲಾಗಿದೆ. ಇದರ ಹಿಂದೆ ಲಕ್ಷಾಂತರ ರೂಪಾಯಿ ಹಣದ ವ್ಯವಹಾರ ನಡೆದಿರುವ ಮಾಹಿತಿಯೂ ಇದೆ.
ಸದಸ್ಯೆಯನ್ನು ಗ್ರಾ.ಪಂ.ಅಧ್ಯಕ್ಷರು ನಿಂದಿಸಿರುವ ಕುರಿತು ಈಗಾಗಲೇ ಪೊಲೀಸ್ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದು, ಘಟಕವನ್ನು ನಿಲ್ಲಿಸದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ. ಪಂಜಿಕಲ್ಲು ಗ್ರಾ.ಪಂ.ನಲ್ಲಿ ಬಿಜೆಪಿಯವರಿಗೆ ಮಾತ್ರ ಸೌಲಭ್ಯಗಳು ಸಿಗುತ್ತಿದ್ದು, ಭ್ರಷ್ಟಾಚಾರ ತುಂಬಿ ಹೋಗಿದೆ ಎಂದು ಆರೋಪಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಸದಸ್ಯೆಗೆ ನಿರಂತರ ಅನ್ಯಾಯವಾಗಿದ್ದು, ದೌರ್ಜನ್ಯವೆಸಗಿದ ಅಧ್ಯಕ್ಷರಿಗೆ ಆ ಸ್ಥಾನದಲ್ಲಿ ಇರಲು ಯೋಗ್ಯತೆಯೇ ಇಲ್ಲವಾಗಿದೆ. ಬೇರೆ ಕಡೆಯಲ್ಲಿ ಓಡಿಸಿದ ಘಟಕವನ್ನು ಪಂಜಿಕಲ್ಲಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಗ್ರಾಮದ ಜನತೆಯೇ ಅದಕ್ಕೆ ಉತ್ತರ ನೀಡಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಅವರು ಈ ಗ್ರಾಮಕ್ಕೆ ಸಾಕಷ್ಟು ಅನುದಾನಗಳನ್ನು ನೀಡಿ ಅಭಿವೃದ್ಧಿಗೆ ಕಾರಣವಾಗಿದ್ದು, ಇಲ್ಲಿನ ಭ್ರಷ್ಟಾಚಾರವನ್ನು ಓಡಿಸಲು ಗ್ರಾಮಸ್ಥರು ಮನಸ್ಸು ಮಾಡಬೇಕು. ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾ.ಪಂ.ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಡಿಒ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾ.ಪಂ.ಮಾಜಿ ಸದಸ್ಯೆ ಪದ್ಮಾವತಿ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ, ವಲಯ ಕಾಂಗ್ರೆಸ್ ಅಧ್ಯಕ್ಷ ದೇವಪ್ಪ ಕುಲಾಲ್, ಗ್ರಾ.ಪಂ.ಸದಸ್ಯೆ ಮಾಲತಿ, ಪ್ರಮುಖರಾದ ಸದಾನಂದ ಶೆಟ್ಟಿ, ವಸಂತ ಸೊರ್ನಾಡು, ದಯಾನಂದ ಗೌಡ, ಮೋಹನ್ ಶೆಟ್ಟಿ, ರವಿ ಆರ್.ಪೂಜಾರಿ, ವಿಕ್ಟರ್ ಪಾಯಸ್, ಕೃಷ್ಣರಾಜ್ ಜೈನ್, ಕೃಷ್ಣಪ್ಪ ಕುಲಾಲ್, ವಸಂತಿ ಸುರೇಶ್, ಶಶಿಧರ್ ಆಚಾರ್ಯ, ಚಂದ್ರಾವತಿ, ಪ್ರೆಸಿಲ್ಲಾ, ವಿಮಲ ಪಾಲ್ಗೊಂಡಿದ್ದರು. ರಾಜೇಶ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.
Advertisement







