
ಬಂಟ್ವಾಳ: ಕರಾವಳಿಯ ಜನರು ಗೌರವಿಸಿ, ಅರಾಧಿಸುವ ತುಳುನಾಡಿನ ಶ್ರೇಷ್ಠ ಜಾನಪದ ಕಲೆ ಯಕ್ಷಗಾನದ ವೇಷ ಧರಿಸಿ ದಸರ ವೇಷವೆಂದು ಜನರಲ್ಲಿ ಭಿಕ್ಷೆ ಬೇಡುವುದನ್ನು ಆಕ್ಷೇಪಿಸಿದ ಹಿರಿಯ ಯಕ್ಷಗಾನ ಕಲಾವಿದರು ಸ್ಥಳದಲ್ಲೇ ವೇಷಧಾರಿಯೊಬ್ಬನ ವೇಷವನ್ನು ಕಳಚಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.



ದಸರ ಹಬ್ಬದ ನೆಪದಲ್ಲಿ ದಾವಣಗೆರೆಯ ವ್ಯಕ್ತಿಯೊಬ್ಬ ಯಕ್ಷಗಾನದ ವೇಷ ಧರಿಸಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದ. ಇದನ್ನು ಗಮನಿಸಿದಂತಹ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿಯವರು ವೇಷಧಾರಿಯನ್ನು ನಿಲ್ಲಿಸಿ ಯಕ್ಷಗಾನದ ವೇಷಕ್ಕೆ ತನ್ನದೇ ಆದ ಗೌರವ ಇದೆ. ಅದು ಅನೇಕ ಮಂದಿ ಕಲಾವಿದರಿಗೆ ಬದುಕು ನೀಡಿದೆ. ಯಕ್ಷ ವೇಷ ಧರಿಸಿ ಭಿಕ್ಷೆ ಬೇಡುವುದು, ಯಕ್ಷಗಾನವನ್ನು ಅವಮಾನಿಸುವುದು ಸರಿಯಲ್ಲ. ತಕ್ಷಣ ವೇಷ ಕಳಚುವಂತೆ ಒತ್ತಾಯಿಸಿದ್ದಲ್ಲದೆ ವೇಷ ಕಳಚುವರೆಗೂ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೊನೆಗೂ ವೇಷ ಕಳಚಿ, ಕ್ಷಮೆ ಕೇಳಿ ತೆರಳ ಬೇಕಾಯಿತು.