ಬಂಟ್ವಾಳ : ವಾಮಮಾರ್ಗದಲ್ಲಿ ಗೆಲ್ಲುವ ಬಿಜೆಪಿ ತಂತ್ರಕ್ಕೆ ಈ ಬಾರಿ ಯಶಸ್ಸು ಸಿಗಲಾರದು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದರು.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/05/0E774A21-81CD-4D11-A504-2DC2E359E7FB-1024x576.jpeg)
ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಅಭಿವೃದ್ಧಿ ಶೂನ್ಯವಾಗಿದೆ. ಜನರ ಮುಂದೆ ಮಾತನಾಡುವುದಕ್ಕೆ ಅವರ ಬಳಿ ವಿಷಯಗಳಿಲ್ಲ. ಹೀಗಾಗಿ ಈ ಬಾರಿ ಕೂಡ ಅವರು ಸುಳ್ಳು, ವದಂತಿಗಳ ಮೂಲಕವೇ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ. ಆದರೆ, ಜನರು ಬಿಜೆಪಿಯ ಇಂತಹ ಕುತಂತ್ರಗಳನ್ನು ಮೆಟ್ಟಿನಿಂತು ಕಾಂಗ್ರೆಸ್ ಅನ್ನು ಭಾರೀ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಭರವಸೆ ವ್ಯಕ್ತಪಡಿಸಿದರು.
![](https://aksharanews.in/wp-content/uploads/2023/04/E1DF6126-69B8-425F-AC1E-A6A5F5124EC0-655x1024.jpeg)
ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ನೇತೃತ್ವ ನಾನು ವಹಿಸಿದ್ದೇನೆ. ಅನೇಕ ದೇವಸ್ಥಾನಗಳಿಗೆ ಧ್ವಜಸ್ಥಂಭ ನೀಡಿ ಸೇವೆ ಸಲ್ಲಿಸಿದ್ದೇನೆ. ಆದರೂ ನನ್ನ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ರೈ ತಿಳಿಸಿದರು.
ರಮಾನಾಥ ರೈಗಳ ಅವಧಿಯಲ್ಲಿ ಬಡವರು, ಅಶಕ್ತರಿಗೆ ಸಾಕಷ್ಟು ಸೌಲಭ್ಯಗಳು ಸುಲಭವಾಗಿ ತಲುಪಿವೆ. ಸುಮಾರು 20,000ಕ್ಕೂ ಅಧಿಕ ಮಂದಿಗೆ ಹಕ್ಕು ಪತ್ರಗಳು ಸಿಕ್ಕಿವೆ. ಅಕ್ರಮ ಸಕ್ರಮ ಭೂಮಿ ಹಂಚಿಕೆಯು ಮಾಯಿಲಪ್ಪ ಸಾಲ್ಯಾನರ ಅಧ್ಯಕ್ಷತೆಯಲ್ಲಿ ನಿಷ್ಪಕ್ಷಪಾತವಾಗಿ, ಭ್ರಷ್ಟಾಚಾರ ರಹಿತವಾಗಿ ಹಂಚಲ್ಪಟ್ಟಿತ್ತು. ಆದರೆ, ಈಗ ಭೂಮಿ ಹಂಚಿಕೆಯ ವಿಷಯದಲ್ಲಿ ಯಾವ ರೀತಿಯ ಭ್ರಷ್ಟಾಚಾರ ನಡೆದಿದೆ ಎಂಬುದು ಬಂಟ್ವಾಳದ ಜನತೆಗೆ ತಿಳಿದಿದೆ ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ರೈ ಹೇಳಿದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಸಜ್ಜನಿಕೆಯ ರಾಜಕಾರಣಕ್ಕೆ ರಮಾನಾಥ ರೈಗಳು ಇಡೀ ರಾಜ್ಯಕ್ಕೆ ಹೆಸರಾದವರು. ಅವರ ಮನೆಗೆ ಯಾರೇ ಬಂದರೂ ವಿನಯ, ವಿದೇಯತೆಯಿಂದ ಕೆಲಸ ಮಾಡಿಕೊಡುತ್ತಾರೆ. ಅಧಿಕಾರ ಇಲ್ಲದಿದ್ದರೂ, ಅವರ ಮನೆಯಲ್ಲಿ ದಿನನಿತ್ಯ ನೂರಾರು ಮಂದಿ ಆಗಮಿಸಿ, ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಂತಹ ಜನನಾಯಕನನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ, ಅವರಿಂದ ಕ್ಷೇತ್ರ ಹಾಗೂ ರಾಜ್ಯದ ಜನತೆಗೆ ಸೇವೆಯನ್ನು ಪಡೆಯುವ ಸೌಭಾಗ್ಯವನ್ನು ಮತದಾರ ಒದಗಿಸಿಕೊಡಬೇಕು ಎಂದು ಅವರು ವಿನಂತಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್, ಕೆಪಿಸಿಸಿ ಮುಖಂಡ ರಾಜಶೇಖರ್ ಕೋಟ್ಯಾನ್, ಕೆಪಿಸಿಸಿ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್, ಪ್ರಮುಖರಾದ ಪದ್ಮಶೇಖರ್ ಜೈನ್, ಜನಾರ್ಧನ್ ಚೆಂಡ್ತಿಮಾರ್, ಅಬ್ಬಾಸ್ ಅಲಿ, ಮೋಹನ್ ಸಾಲ್ಯಾನ್, ಬಾಲಾಜಿ ರಾವ್ ಮತ್ತಿತರರು ಉಪಸ್ಥಿತರಿದ್ದರು.
![](https://aksharanews.in/wp-content/uploads/2023/05/65088E01-B27D-459B-B18C-A0CC3136F8A3-1024x576.jpeg)
ಚುನಾವಣಾ ಕಚೇರಿಗೆ ಭೇಟಿ : ಕೇರಳ ವಿಧಾನಸಭಾ ವಿಪಕ್ಷ ನಾಯಕ ರಮೇಶ್ ಚೆನ್ನಿತಲ, ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತಾನ್, ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷದ್ ವರ್ಕಾಡಿ ಬುಧವಾರ ರಮಾನಾಥ ರೈ ಅವರ ಬಿ.ಸಿ.ರೋಡ್ ನ ಚುನಾವಣಾ ಪ್ರಚಾರ ಕಚೇರಿಗೆ ಭೇಟಿ ನೀಡಿದರು. ರೈ ಅವರು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಬರಲಿ ಎಂದು ಈ ವೇಳೆ ರಮೇಶ್ ಚೆನ್ನಿತಲ ಹಾಗೂ ಇತರ ಮುಖಂಡರು ಹಾರೈಸಿದರು. ರೈಯವರ ಚುನಾವಣಾ ಪ್ರಚಾರದ ಕಾರ್ಯವೈಖರಿಯ ಬಗ್ಗೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದರು.
![](https://aksharanews.in/wp-content/uploads/2024/01/aksharanews-ad.jpg)