
ಬಂಟ್ವಾಳ: ಕಲ್ಲಡ್ಕ ಮ್ಯೂಸಿಯಂನ ಸ್ಥಾಪಕ ಮಹಮ್ಮದ್ ಯಾಸೀರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಮಹಮ್ಮದ್ ಯಾಸೀರ್ ಕಲ್ಲಡ್ಕದ ಬೀಡಿ ಉದ್ಯಮಿ. ಇವರ ಹಳೇ ವಸ್ತುಗಳು ಹಾಗೂ ವಿವಿಧ ದೇಶಗಳ ಕರೆನ್ಸಿ ಸಂಗ್ರಹ ಇಂದು ಕಲ್ಲಡ್ಕ ಮ್ಯೂಸಿಯಂ ಆಗಿ ಬದಲಾಗಿದೆ. ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹ ಇವರ ಮ್ಯೂಸಿಯಂ ನಲ್ಲಿದೆ.ಮನೆಯೇ ಇವರ ವಸ್ತು ಸಂಗ್ರಹಾಲಯ.
2003ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾಣ್ಯ ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಇಂದು ಅವರ ಮ್ಯೂಸಿಯಂ ನಲ್ಲಿ ಪುರಾತನ ವಸ್ತುಗಳು, ಅಪರೂಪದ ಕರೆನ್ಸಿಗಳು, ಫ್ಯಾನ್ಸಿ ನೋಟುಗಳು, ಹಳೆಯ ಪತ್ರಿಕೆಗಳು ಸೇರಿದಂತೆ ಅಪರೂಪದ ವಸ್ತುಗಳನ್ನು ನೋಡಬಹುದಾಗಿದೆ. ಮ್ಯೂಸಿಯಂಗೆ ಭೇಟಿ ನೀಡುವ ಪ್ರತಿಯೊಬ್ಬ ವೀಕ್ಷಕನಿಗೂ ಅವರ ಸಂಗ್ರಹದಲ್ಲಿರುವ ಪ್ರತಿಯೊಂದು ವಸ್ತುವಿನ ನಿಖರವಾದ ಮಾಹಿತಿ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಮಹಾಯುದ್ಧದ ಸಂದರ್ಭ ಬಳಕೆಯಲ್ಲಿದ್ದ ವಸ್ತುಗಳು ಸೇರಿದಂತೆ ದೇಶ ವಿದೇಶದ ಮಹಾನ್ ನಾಯಕರ ನೆನಪು ಮೂಡಿಸುವಂತ ಅಪರೂಪದ ವಸ್ತುಗಳು ಇಲ್ಲಿವೆ.
