![](https://aksharanews.in/wp-content/uploads/2023/05/ak-1.jpg)
ಬಂಟ್ವಾಳ: ಜಿಲ್ಲೆಯ ಕಂಬಳ ಇತಿಹಾಸದಲ್ಲಿಯೇ ಪ್ರಥಮ ಎನ್ನುವಂತೆ ಒಂದೇ ದಿನ, ಒಂದೇ ಗ್ರಾಮದಲ್ಲಿ, ಒಂದೇ ಹೆಸರಿನ ಎರಡು ಕಂಬಳ ಕೂಟಗಳು ಶನಿವಾರ ನಡೆದು ಕಂಬಳ ಕೋಣಗಳ ಯಜಮಾನರು ಹಾಗೂ ಕಂಬಳಾಭಿಮಾನಿಗಳಲ್ಲಿ ಅಚ್ಚರಿ ಹಾಗೂ ಗೊಂದಲ ಮೂಡಿಸಿದೆ.
ಕಂಬಳ ಇತಿಹಾಸದಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಹೊಕ್ಕಾಡಿ ಗೋಳಿ ವೀರ ವಿಕ್ರಮ ಕಂಬಳವು ಈ ಬಾರಿ ಮಹಿಷಮರ್ಧಿನಿ ಕಂಬಳ ಸಮಿತಿ ಹಾಗೂ ವೀರ ವಿಕ್ರಮ ಕಂಬಳ ಸಮಿತಿ ಎನ್ನುವ ಎರಡು ಪ್ರತ್ಯೇಕ ಸಮಿತಿಗಳ ಮೂಲಕ ಪ್ರತ್ಯೇಕ ಕಡೆಗಳಲ್ಲಿ ಆಯೋಜನೆಗೊಂಡಿತು. ಇದು ಜಿಲ್ಲಾ ಕಂಬಳ ಸಮಿತಿಯ ಪ್ರಮುಖರಿಗೆ ಉಭಯ ಸಂಕಟವನ್ನು ನೀಡಿದರೆ ಕಂಬಳಕ್ಕೆ ಬರುವ ಕೋಣಗಳ ಯಜಮಾನರು ಕಂಬಳಾಭಿಮಾನಿಗಳು ಗೊಂದಲಕ್ಕೀಡು ಮಾಡಿ ಎರಡು ಕಂಬಳಗಳಲ್ಲಿ ಕೋಣಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಮಹಿಷಮರ್ಧಿನಿ ಕಂಬಳ ಸಮಿತಿ ಮೂಲಕ ನಡೆಯುವ ಕಂಬಳಕ್ಕೆ ತಡೆಯಾಜ್ಞೆಕೋರಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಉಚ್ಛನಾಯ್ಯಾಲಯ ತಡೆಹಿಡಿದ ಕಾರಣ ಯಾವುದೇ ಅಡ್ಡಿ ಇಲ್ಲದೆ ಎರಡೂ ಕಡೆ ಕಂಬಳ ನಡೆದಿದೆ.
![](https://aksharanews.in/wp-content/uploads/2024/03/1F8C197B-568D-4FED-AE26-3ED20587399B-1024x461.jpeg)
.॒
ರಶ್ಮಿತ್ ಶೆಟ್ಟಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳ:
ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ
ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಮಾತನಾಡಿ, ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು ಇದೆ. ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ಕಂಬಳ ಪ್ರತ್ಯೇಕಗೊಂಡಿರುವುದು ಬಹಳ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಂಬಳ ನಡೆಸುವಂತಾಗಲು ದೇವರ ಅನುಗ್ರಹವಿರಲಿ ಎಂದು ಹೇಳಿದರು.
ಜಿಲ್ಲಾ ಕಂಬಳ ಸಮಿತಿ ಕಾರ್ಯಧ್ಯಕ್ಷ ಗುಣಪಾಲ ಕಡಂಬ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವೇಷ ಸಾಧನೆಗೆ ಕಂಬಳವನ್ನು ಬಲಿಕೊಡುವಂತಾಗಬಾರದು. ಒಂದೇ ಊರಲ್ಲಿ ಒಂದೇ ದಿನ ಎರಡು ಕಂಬಳ ನಡೆಯದಂತೆ ಜಿಲ್ಲಾ ಕಂಬಳ ಸಮಿತಿ ಮಾತುಕತೆ ಮೂಲಕ ಬಗೆ ಹರಿಸದಿರುವುದು ವಿಷಾದನೀಯ ಎಂದರು.
ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಟಿ.ವಿ. ನಿರೂಪಕ ನವನೀತ ಶೆಟ್ಟಿ ಕದ್ರಿ ಶುಭ ಹಾರೈಸಿದರು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ, ಸದಸ್ಯೆ ಶೋಭಾ, ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು,ಕುಟ್ಟಿ ಶೆಟ್ಟಿ ಹಕ್ಕೇರಿ, ಕುಕ್ಕಿಪಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾಬಲ ಶೆಟ್ಟಿ, ಮಾಜಿ ಉಪಾಧ್ಯಕ್ಷ ಯೋಗೀಶ ಆಚಾರ್ಯ , ಆರಂಬೋಡಿ ಪಿಡಿಒ ಸ್ಮೃತಿ ನಾಯಕ್, ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಉದ್ಯಮಿ ರಾಜೇಶ್ ಗೋವಿಂದಬೆಟ್ಟು, ಮೂಡುಬಿದಿರೆ ಯೋಜನಾ ಪ್ರಾಽಕಾರ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪುತ್ತಿಗೆಗುತ್ತು ಸಂದೀಪ್ ಸೆಟ್ಟಿ,ಸಚಿನ್ ಅಡಪ ಗುರುಪುರ, ಪ್ರಶಾಂತ್ ಸಾಲ್ಯಾನ್, ಸಮಿತಿ ಪದಾಧಿಕಾರಿಗಳಾದ ಪ್ರಭಾಕರ ಹುಲಿಮೇರು,ರಾಜೇಶ್ ಜಿ. ಶೆಟ್ಟಿ ಸಿದ್ದಕಟ್ಟೆ, ಸಂತೋಷ್ ಶೆಟ್ಟಿ ಕೊನೆರೊಟ್ಟುಗುತ್ತು, ಸತೀಶ್ ಮಠ,ಕೃಷ್ಣಶೆಟ್ಟಿ ಉಮನೊಟ್ಟು,ಸಂತೋಷ್ ಕುಮಾರ್ ಚೌಟ, ಚಂದ್ರಶೇಖರ ಕಾರಂಬಡೆ, ಚಂದ್ರಶೇಖರ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
![](https://aksharanews.in/wp-content/uploads/2024/03/9C7A0F62-A683-43ED-95F8-8FF0F6E2C13B-1024x682.jpeg)
.॒.
ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದಲ್ಲಿ ಕೊಡಂಗೆಯಲ್ಲಿ ನಡೆಯುವ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ:
ಕಂಬಳ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಹೊಸ ಆವಿಷ್ಕಾರ, ಬದಲಾವಣೆಗಳು ನಡೆಯುತ್ತಿದ್ದು ಹೊಕ್ಕಾಡಿಗೋಳಿ ಕಂಬಳದ ಮೂಲಕ ಪೋಟೋ ಫಿನಿಶ್ ತೀರ್ಪು ವ್ಯವಸ್ಥೆ ಹಾಗೂ ಮುಂದಿನ ಕಂಬಳದಲ್ಲಿ ಅಟೋಚಾಲಿತ ಗೇಟ್ ವ್ಯವಸ್ಥೆಗೂ ಚಾಲನೆ ನೀಡಲಿದ್ದೇವೆ ಎಂದು ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಬಂಟ್ವಾಳ ತಾಲೂಕಿನ ಎಲಿಯ ನಡುಗೋಡು ಗ್ರಾಮದ ಹೊಕ್ಕಾಡಿಗೋಳಿ ಕೊಡಂಗೆಯಲ್ಲಿ ವೀರವಿಕ್ರಮ ಕಂಬಳದಲ್ಲಿ ನೂತನ ಕರೆ ಉದ್ಘಾಟಿಸಿ ಮಾತನಾಡಿದರು.
ಪೋಟೊ ಫಿನಿಶ್ ತೀರ್ಪು ವ್ಯವಸ್ಥೆ ಆರಂಭಗೊಂಡಿರುವುದರಿಂದ ಇನ್ನು ಗೊಂದಲದ ತೀರ್ಪುಗಳು ಬರಲು ಸಾಧ್ಯವಿಲ್ಲ. ಅಟೋಚಾಲಿತ ಗೇಟ್ ವ್ಯವಸ್ಥೆಯೂ ಪ್ರಾಯೋಗಿಕ ಪ್ರಯತ್ನಗಳು ಈಗಾಗಲೇ ನಡೆದಿದ್ದು ಮುಂದಿನ ಕಂಬಳಕ್ಕೆ ಸಿದ್ದವಾಗಲಿದೆ ಎಂದರು.
ಹೊಕ್ಕಾಡಿಗೋಳಿ ಕಂಬಳದಲ್ಲಿ ಸಣ್ಣ ಗೊಂದಲಗಳು ಉಂಟಾಗಿ ಒಂದೇ ದಿನ ಎರಡು ಕಂಬಳಗಳು ನಡೆಯುವ ಸನ್ನಿವೇಶ ನಿರ್ಮಾಣಗೊಂಡಿದೆ. ಇದು ಬೇಸರದ ಸಂಗತಿಯಾಗಿದ್ದು ಕಂಬಳದ ಹಿರಿಯರನ್ನು ಸೇರಿಸಿಕೊಂಡು ಅನೇಕ ಸಭೆಗಳನ್ನು ಕರೆದು ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸಿದರೂ ಫಲ ಸಿಕ್ಕಿಲ್ಲ. ಜಿಲ್ಲಾ ಕಂಬಳ ಸಮಿತಿ ಹಿರಿಯರ ನಿರ್ಧಾರದಂತೆ ಸಂದೀಪ್ ಶೆಟ್ಟಿ ನೇತೃತ್ವದ ಕಂಬಳಕ್ಕೆ ಅವಕಾಶ ನೀಡಿದೆ. ಕಂಬಳದ ಶಿಸ್ತು ಸಂಯಮವನ್ನು ಎಲ್ಲರೂ ಪಾಲಿಸಬೇಕು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಈವರೆಗೆ ಕಂಬಳಕ್ಕೆ ಸರಕಾರದಿಂದ ೫ ಲಕ್ಷ ಮಾತ್ರ ಸಹಾಯಧನ ಸಿಗುತ್ತಿದ್ದು ಮುಂದಿನ ದಿನಗಳಲ್ಲಿ 10 ಲಕ್ಷ ರೂಪಾಯಿ ಆರ್ಥಿಕ ಸಹಕಾರ ಪಡೆಯುವ ಬಗ್ಗೆ ಕ್ರೀಡಾ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು, ಪಿಲಿಕುಳದಲ್ಲಿ ೨ ಎಕರೆ ಜಾಗ ಪಡೆದು ಸರ್ಕಾರದ ಅಧಿಕೃತ ಕಂಬಳವನ್ನು ಮಾಡಬೇಕು ಎನ್ನುವ ಉದ್ದೇಶವೂ ಇದ್ದು ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ನೀಡಲಾಗಿದೆ. ಕಂಬಳ ತರಬೇತಿ ಕೇಂದ್ರ, ವಸ್ತು ಪ್ರದರ್ಶಕ್ಕೆ ಕಂಬಳ ಭವನ ನಿರ್ಮಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಇದೇ ಪ್ರಥಮ ಬಾರಿಗೆ ಕಂಬಳದಲ್ಲಿ ಪೋಟೊ ಫಿನಿಶ್ ವ್ಯವಸ್ಥೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಅವರು ಮಾತನಾಡಿ ಪರಂಪರೆಯಿಂದ ದೈವಿಕ ಆಚರಣೆಯ ಮೂಲಕ ಕಂಬಳ ನಡೆದುಕೊಂಡು ಬಂದಿದೆ. ದೈವ ಹಾಗೂ ನಾಗ ಸಾನಿಧ್ಯವಿರುವ ಈ ಸ್ಥಳ ಕಂಬಳಕ್ಕೆ ಪೂರಕವಾದ ಸ್ಥಳ. ಹೊಸದಾಗಿ ಆರಂಭಗೊಂಡರೂ ಸುಂದರವಾದ ಹಾಗೂ ವ್ಯವಸ್ಥಿತವಾದ ಕರೆ ನಿರ್ಮಣಗೊಡಿದೆ. ಜಿಲ್ಲಾ ಕಂಬಳ ಸಮಿತಿ ಮೂಲಕ ಆಗುವ ಕಂಬಳವೇ ಅಧಿಕೃತ ಕಂಬಳವಾಗಲಿದ್ದು, ಕಂಬಳಕ್ಕೆ ಹೊಸ ರೂಪ ಕೊಡುವ ಕೆಲಸ ಆಗಬೇಕು ಎಂದು ತಿಳಿಸಿದರು. ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಒಂದಾಗಿ ಕಂಬಳ ನಡೆಸುವಂತಾಗಲಿ ಎಂದರು. ಶ್ರೀ ಕ್ಷೇತ್ರ ಪೂಂಜದ ಪ್ರ.ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಉದ್ಘಾಟಿಸಿದರು. ಜಿಲ್ಲಾ ಕಂಬಳ ಸಮಿತಿ ಪ್ರ.ಕಾರ್ಯದರ್ಶಿ ಲೋಕೆಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ಪಶು ವೈದ್ಯ ಡಾ.ಶ್ರೀಧರ ಶೆಟ್ಟಿ, ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಟಿ.ವಿ. ನಿರೂಪಕ ನವನೀತ ಶೆಟ್ಟಿ ಕದ್ರಿ, ಶ್ರೀ ಕ್ಷೇತ್ರ ಪೂಂಜದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಸಂತೋಷ್ ಕುಮಾರ್ ಚೌಟ, ಚಂದ್ರಶೇಖರ ಕಾರಂಬಡೆ, ಜೋಕಿಂ ಸಿಕ್ವೆರಾ, ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸುರೇಶ್ ಶೆಟ್ಟಿ ಕುತ್ಲೋಡಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಕಿರಣ್ ಕುಮಾರ್ ಮಂಜಿಲ, ಚಂದ್ರಶೇಖರ ಕೊಡಂಗೆ, ವಸಂತ ಶೆಟ್ಟಿ ಕೇದಗೆ, ಉಮೇಶ್ ಶೆಟ್ಟಿ ಕೊನೆರೊಟ್ಟುಗುತ್ತು, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸುಧಾಕರ ಚೌಟ, ಜನಾರ್ದನ ಬಂಗೇರ, ಉಮೇಶ್ ಹಿಂಗಾಣಿ, ಬಿ.ಶಿವಾನಂದ ರೈ ಮತ್ತಿತರರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು, ಗೌರವ ಸಲಹೆಗಾರ ಸುರೇಶ ಶೆಟ್ಟಿ ಸಿದ್ದಕಟ್ಟೆ ಪ್ರಸ್ತಾವಿಸಿದರು. ಕಿಶೋರ್ ಶೆಟ್ಟಿ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.
![](https://aksharanews.in/wp-content/uploads/2024/01/aksharanews-ad.jpg)