ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಹಾಗೂ ಬಂಟ್ವಾಳ ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ರಾಜಾಧ್ಯಕ್ಷ ಬಿ. ವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಪಕ್ಷದ ಧ್ವಜ ಹಾಗೂ ಶಾಲು ಹಾಕಿ ಇಬ್ಬರನ್ನು ರಾಜಾಧ್ಯಕ್ಷರು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭ ಕವಿತಾ ಸನಿಲ್ ಮಾತನಾಡಿ ಮೋದಿಯವರ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದೇನೆ. ಸನಾತನ ಧರ್ಮದ ರಕ್ಷಣೆಯನ್ನು ಬಿಜೆಪಿ ಮಾಡುತ್ತಿದ್ದು ಕಾಂಗ್ರೆಸ್ನ ಕೆಲವೊಂದು ನಡವಳಿಕೆಯಿಂದ ಬೇಸತ್ತು ಪಕ್ಷ ತೊರೆದಿದ್ದೇನೆ ಎಂದರು.
ಈ ಬಾರಿ ನಾವು ಹಾಕುವ ಓಟು ರಾಮನಿಗೆ ಹಾಕುವ ಓಟಾಗಿದ್ದು ಸೈನಿಕನಿಗೆ ಬೆಂಬಲ ನೀಡಬೇಕಾಗಿದೆ. ದೇಶಕ್ಕೆ ಮೋದಿ ಸೈನಿಕನಾದರೆ ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ ಸೈನಿಕನಾಗಿ ಕಾಯಲಿದ್ದಾರೆ. ಧರ್ಮ ಉಳಿದರೆ ಜಾತಿ ಉಳಿಯುತ್ತದೆ. ನಾನು ಬಿಲ್ಲವ ಮಹಿಳೆ ಎನ್ನುವುದಕ್ಕಿಂತಲೂ ನಾನೋರ್ವ ಹಿಂದು ಎನ್ನಲು ಹೆಮ್ಮೆ ಪಡುತ್ತೇನೆ ಎಂದ ಅವರು ತನ್ನ ರಾಜಕೀಯ ಗುರು ಜನಾರ್ದನ ಪೂಜಾರಿಯವರ ಆಶೀರ್ವಾದ ಹಾಗೂ ಒಪ್ಪಿಗೆ ಪಡೆದೇ ಬಿಜೆಪಿಗೆ ಬಂದಿರುವುದಾಗಿ ತಿಳಿಸಿದರು.