ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೧೪ನೇ ಬಿ.ಸಿ.ರೋಡು ಶಾಖೆ ಜಿ.ಕೆ. ಸ್ಮಾರ್ಟ್ ಸಿಟಿ ಕಟ್ಟಡದ ಒಂದನೇ ಮಹಡಿಯಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ತೀರ್ಥಾಧಿಪತಿ, ಹೊಸ್ಮಾರು ಬಲ್ಯೊಟ್ಟು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಒಳಿತು ಮಾಡುವ ಮನೋಭಾವ ಇದ್ದಲ್ಲಿ ಅಭಿವೃದ್ದಿ ಕೆಲಸಗಳು ನಿತಂತರವಾಗಿ ನಡೆಯುತ್ತಿರುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದಲ್ಲಿ ಅನುಷ್ಠಾನಗೊಂಡಿದ್ದು ಎಲ್ಲರಿಂದಲೂ ಹಣ ಶೇಖರಣೆ ಮಾಡಿ ಬಡವವರ ಕಷ್ಟಕ್ಕೆ ಆರ್ಥಿಕ ಸಹಕಾರ ನೀಡುವ ಮೂಲಕ ಅದು ವಿನಿಯೋಗವಾಗುತ್ತಿದೆ ಎಂದು ತಿಳಿಸಿದರು. ಸಹಕಾರಿ ಸಂಘಗಳಲ್ಲಿ ಗ್ರಾಹಕರಿಗೆ ನನ್ನದು ಎನ್ನುವ ಆತ್ಮೀಯ ಮನೋಭಾವವಿರುತ್ತದೆ, ಬ್ಯಾಂಕ್ ಅಭಿವೃದ್ಧಿಯಾಗಬೇಕಾದರೆ ಸಿಬ್ಬಂದಿಗಳು ಗ್ರಾಹಕರಿಗೆ ಮಾರ್ಗದರ್ಶನ ಮಾಡುವ ಕೆಲಸ ಆಗಬೇಕಾಗಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಪೇಕ್ಷೆಯ ಕಾರ್ಯ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಮೂಲಕ ನಡೆಯುತ್ತಿದ್ದು ಇದೊಂದು ಶಕ್ತಿಶಾಲಿ ಸಹಕಾರಿ ಸಂಘ ಎಂದರು.
ಬ್ಯಾಂಕ್ಗಳು ರಾಷ್ಟ್ರೀಕೃತಗೊಂಡರೂ ಬ್ಯಾಂಕಿನ ಅಧಿಕಾರಿಗಳು, ನೌಕರರ ಮನೋಭಾವ ಬದಲಾಗಿಲ್ಲ, ಆ ಕಾರಣಕ್ಕಾಗಿ ಜನರು ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತಲೂ ಹೆಚ್ಚಾಗಿ ಸಹಕಾರಿ ಬ್ಯಾಂಕ್ಗಳ ಮೇಲೆ ವಿಶ್ವಾಸ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದಾರೆ ಎಂದರು. ಪರ್ಯಾಯ ವ್ಯವಸ್ಥೆಯ ಸಹಕಾರಿ ಸಂಘ ಇದಾಗಿದ್ದು ಇನ್ನಷ್ಟು ಶಾಖೆಗಳನ್ನು ತೆರೆಯಲಿ ಎಂದು ಶುಭ ಹಾರೈಸಿದರು.
ಬಿ.ಸಿ.ರೋಡಿನ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸೇಫ್ ಲಾಕರ್ ಉದ್ಘಾಟಿಸಿ ಮಾತನಾಡಿ ಅನೇಕ ಮಂದಿಗೆ ಮಹಿಳೆಯರಿಗೆ ಉದ್ಯೋಗ ನೀಡಿ ಮುನ್ನಡೆಯುತ್ತಿರುವ ಈ ಸಹಕಾರಿ ಸಂಘಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡವರಿಗೆ ಸುಲಭದಲ್ಲಿ ಸಾಲ ಸಿಗಬೇಕು ಎನ್ನುವ ಉದ್ದೇಶದಿಂದ ಹೆಚ್ಚೆಚ್ಚು ಶಾಖೆಗಳನ್ನು ತೆರೆಯಲಾಗುತ್ತಿದೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಪಾಲನೆ ಮಾಡಿಕೊಂಡು ಬರುತ್ತಿದ್ದು ಪ್ರಾಮಾಣಿಕ ಸೇವೆಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಟ್ಟು 25 ಶಾಖೆಗಳನ್ನು ತೆರೆದು 100 ಮಂದಿ ಮಹಿಳೆಯರಿಗೆ ಕೆಲಸ ನೀಡುವ ಗುರಿ ಇದೆ ಎಂದರು.
ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ವಕೀಲ ಅರುಣ್ ರೋಶನ್ ಡಿಸೋಜ ಗಣಕಯಂತ್ರ ವ್ಯವಸ್ಥೆ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ ನಿತ್ಯನಿಧಿ ಹಾಗೂ ಟೇವಣಿ ಪತ್ರ ಬಿಡುಗಡೆಗೊಳಿಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಲೆ, ಕೆ.ಸುಜಾತ ಮೋಹನದಾಸ, ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ.ಸ್ವಾಗತಿಸಿದರು, ಸಿಬ್ಬಂದಿ ವಿಜಯ ಕೆ.ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.