![](https://aksharanews.in/wp-content/uploads/2024/05/EEF6B839-6648-4474-9B3A-D0AA3BCAC2E3-1024x685.jpeg)
ಬಂಟ್ವಾಳ: ಚುನಾವಣೆ ಸಂದರ್ಭ ಹಣಕಾಸು ನೆರವು ಗ್ಯಾರಂಟಿ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ಪಕ್ಷಗಳ ಮೇಲೆ ನಿಗಾ ವಹಿಸಲು ಸೂಕ್ತ ನಿಯಾಮವಳಿ ರೂಪಿಸುವಂತೆ ಬಂಟ್ವಾಳ ತಾಲೂಕು ಪಂಚಾಯತಿ ಮಾಜಿ ಸದಸ್ಯ ಪ್ರಭಾಕರ ಪ್ರಭು ಮುಖ್ಯ ಚುನಾವಣ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮುಖ್ಯ ಚುನಾವಣ ಆಯುಕ್ತಪತ್ರ ಬರೆದಿರುವ ಅವರು ಇತ್ತೀಚಿನ ಲೋಕಸಭೆ ಚುನಾವಣೆ , ವಿಧಾನ ಸಭೆ ಚುನಾವಣೆಗಳಿಗೆ ಸಂಬಂಧಿಸಿದಂತೆ, ಕೆಲವೊಂದು ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯ ಹೆಸರಲ್ಲಿ ಹೊರತರುವ ಭರವಸೆಗಳ ಪಟ್ಟಿಯಲ್ಲಿ ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಮತದಾರರಿಗೆ ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಇಂತಿಷ್ಟು ಹಣಕಾಸು ನೆರವು ನೀಡುತ್ತೇವೆ ಎಂಬುದಾಗಿ ಗ್ಯಾರಂಟಿ ಯೋಜನೆಯ ಹೆಸರಿನಡಿಯಲ್ಲಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿ ಮತದಾರರನ್ನು ಹಣದ ಆಮಿಷಕ್ಕೆ ಒಳಗಾಗುವಂತೆ ಪ್ರೇರೆಪಣೆ ನೀಡುತ್ತಿರುವುದು ಕಂಡುಬರುತ್ತಿದೆ. ರಾಜಕೀಯ ಪಕ್ಷಗಳ ಈ ಕೆಟ್ಟ ಪದ್ದತಿಯಿಂದಾಗಿ ಹಲವು ಪ್ರಜ್ಞಾವಂತ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ತನ್ನ ಸ್ವಂತ ತಿಳುವಳಿಕೆಯ ನಿರ್ಧಾರದಿಂದ ಹೊರಬಂದು ಹಣ ಗಳಿಸುವ ದುರಾಶೆಗೆ ಬಲಿಯಾಗುತ್ತಿದ್ದು, ತನ್ನ ಜನ್ಮಸಿದ್ದ ಮತದಾನದ ಹಕ್ಕನ್ನು ಹಣದ ಆಮಿಷಗಳಿಗೆ, ಆಸೆಗಳಿಗೆ ನೀಡುತ್ತಿರುವುದರಿಂದ ನೈಜ ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆ ತರುವಂತಾಗಿದೆ.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ನಿಯಾಮವಳಿಯಂತೆ ಚುನಾವಣೆ ಸಂಧರ್ಭದಲ್ಲಿ ಮತದಾರರಿಗೆ ಹಣ ನೀಡುವಂತಿಲ್ಲ, ಹೆಂಡ ಹಂಚುವಂತಿಲ್ಲ ಇತ್ಯಾದಿಗಳಿಂದ ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಇರುವುದಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಸಂಧರ್ಭದಲ್ಲಿ ಬಹಿರಂಗವಾಗಿಯೇ ಪ್ರತಿ ಮತದಾರರಿಗೆ ವಾರ್ಷಿಕವಾಗಿ, ಮಾಸಿಕವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಭರವಸೆ ನೀಡುತ್ತಿರುವುದು ಸಹ ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾದಂತೆ ಗೋಚರಿಸುತ್ತಿದೆ. ಇದರಿಂದ ದೇಶ ಹಾಗೂ ರಾಜ್ಯಗಳ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲನ ಕಳೆದುಕೊಳ್ಳಲಿದ್ದು, ನಿತ್ಯ ನಿರಂತರವಾದ ಅತ್ಯವಶ್ಯಕವಾದ ವ್ಯವಸ್ಥೆಗಳ ಅನುಷ್ಠಾನದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ. ಈ ವಿಚಾರದ ಬಗ್ಗೆ ಚುನಾವಣೆ ಆಯೋಗದ ಮೃದು ಧೋರಣೆಯ ನಿಯಮ ಸಡಿಲಿಕೆಯ ಕ್ರಮವನ್ನು ಪ್ರಜ್ಞಾವಂತ ವ್ಯಕ್ತಿಗಳು ಅಲ್ಲಲ್ಲಿ ಸಾರ್ವಜನಿಕವಾಗಿ ,ಬಹಿರಂಗವಾಗಿ ಚುನಾವಣಾ ಆಯೋಗದ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ, ಈ ಕಡಿವಾಣಕ್ಕೆ ಕಟ್ಟುನಿಟ್ಟಿನ ನಿಯಾಮವಳಿಗಳನ್ನು ರೂಪಿಸುವ ಬಗ್ಗೆ ಮಾತಾನಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳಿಂದ ಚುನಾವಣಾ ಆಯೋಗವು ಪ್ರಸ್ತುತ ಇರುವ ಮಾದರಿ ನೀತಿ ಸಂಹಿತೆಯ ಕ್ರಮಗಳನ್ನು ಪರಿಷ್ಕ್ರತಗೊಳಿಸಿ ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭ ಸಾರ್ವಜನಿಕವಾಗಿ ಅಭಿವೃದ್ದಿ ವಿಷಯ ಹೊರತಾಗಿ ವೈಯಕ್ತಿಕವಾಗಿ ಹಣಕಾಸು ನೆರವು ಸೇರಿದಂತೆ ಇನ್ನಿತರ ವೈಯಕ್ತಿಕ ನೆರವುಗಳನ್ನು ಘೋಷಣೆ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆ ಹಿಡಿಯಬೇಕು ಹಾಗೆ ಮಾಡಿದ್ದಲ್ಲಿ ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಗೊಳಿಸಿ ಅಂತಹ ರಾಜಕೀಯ ಪಕ್ಷಗಳ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಅಮಾನ್ಯಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ಒಂದು ಸಮರ್ಪಕವಾದ ,ನ್ಯಾಯ ಸಮ್ಮತವಾದ ಕಾನೂನು ,ನಿಯಾಮವಳಿ ರೂಪಿಸಬೇಕೇಂದು ಮನವಿ ಮಾಡಿದ್ದಾರೆ
![](https://aksharanews.in/wp-content/uploads/2024/01/aksharanews-ad.jpg)