ಬಂಟ್ವಾಳ: ಬಿ.ವಿ.ಕಾರಂತ್, ಜಿ.ವಿ. ಅಯ್ಯರ್ ಅವರಂತಹ ಶ್ರೇಷ್ಠ ಸಾಧಕರೊಂದಿಗಿನ ಒಡನಾಟ ನನ್ನ ಬದುಕಿಗೆ ಧನ್ಯತೆ ನೀಡಿದೆ ಎಂದು ಅಂತರಾಷ್ಟೀಯ ಜಾದೂಗಾರ್ ಪ್ರೊ. ಶಂಕರ್ ಹೇಳಿದರು.
ಅವರು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು
ಇದರ ಸಹಯೋಗದಲ್ಲಿ ಕುಕ್ಕಾಜೆಯ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಂಚಿ ಬಿ.ವಿ.ಕಾರಂತ ನೆನೆಪಿನ ಮಂಚಿ ನಾಟಕೋತ್ಸವವನ್ನು ಉದ್ಘಾಟಿಸಿ ಬಳಿಕ ಬಿ.ವಿ.ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದರು. ನಾಟಕದಲ್ಲಿ ಮ್ಯಾಜಿಕ್ ಬೇಕು, ಮ್ಯಾಜಿಕ್ ನಲ್ಲಿ ನಾಟಕ ಬೇಕು ಎಂದ ಅವರು ಬಿ.ವಿ. ಕಾರಂತ್ ಹೆಸರನ್ನು ಚಿರಸ್ಥಾಯಿಗೊಳಿಸಲು ರಂಗಭೂಮಿ ಟ್ರಸ್ಟ್ ಸತತ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಂಚಿ ಎನ್ನುವ ಚಿಕ್ಕ ಹಳ್ಳಿಯಿಂದ ಮನೆ ಬಿಟ್ಟು ಹೋದ ವ್ಯಕ್ತಿ ಬಿ.ವಿ.ಕಾರಂತರು, ಭಾರತೀಯ ರಂಗಭೂಮಿಗೆ ವಿಶ್ವಮಾನ್ಯತೆ ತಂದುಕೊಟ್ಟವರು, ವಿಭಿನ್ನ, ವಿಶೇಷ ಪ್ರಯೋಗವನ್ನು ನಾಟಕಕ್ಕೆ ನೀಡಿದವರು ಎಂದರು. ರಂಗಭೂಮಿಗೆ ಸಂಬಂಧಪಟ್ಟ ಕೆಲಸ, ಅಧ್ಯಯನ, ಸಂಶೋಧನೆ, ವಿಚಾರ ಸಂಕಿರಣ ಕಾರಂತರ ಹುಟ್ಟೂರಲ್ಲಿ ಆಗಬೇಕಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಮಾತನಾಡಿ ಸಿನಿಮಾಗಳಲ್ಲಿ ಹೊಸತನದ ಕಲ್ಪನೆಯನ್ನು ಪರಿಚಯಿಸಿದವರು ಬಿ.ವಿ.ಕಾರಂತರು ಎಂದರು. ಹುಟ್ಟೂರಲ್ಲಿ ಹೆಸರಾಂತ ವ್ಯಕ್ತಿಗಳನ್ನು ನೆನೆಪಿಸಿಕೊಂಡಾಗ ನಮಗೆ ಗೌರವ ಸಿಗುತ್ತದೆ. ಆ ಮೂಲಕ ನಮ್ಮ ಸೇವೆ ಸಾರ್ಥಕ್ಯವನ್ನು ಪಡೆಯುತ್ತದೆ ಎಂದು ತಿಳಿಸಿದರು.ನಾಟಕದಲ್ಲಿ ಹಾಸ್ಯವೇ ಪ್ರಧಾನವಾಗುತ್ತಿರುವ ಈ ಕಾಲಘಟ್ಟದಲ್ಲಿ ನವ್ಯ ನಾಟಕಗಳು ರುಚಿಸುತ್ತವೇಯೇ? ಎನ್ನುವ ಸಂದಿಗ್ದತೆಯಲ್ಲಿ ರಂಗಭೂಮಿಕ ಟ್ರಸ್ಟ್ ಪ್ರತಿ ವರ್ಷ ರಂಗ ನಾಟಕವನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಆ ಮೂಲಕ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಿ ಕೊಂಡು ಬರುತ್ತಿದೆ ಎಂದರು.
ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಚ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಶಿಕ್ಷಕರಾದ ಉಮನಾಥ ರೈ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಟ ಮಿತ್ರರು ತೀರ್ಥಹಳ್ಳಿ ಇವರಿಂದ ಸಂಸಾರದಲ್ಲಿ ಸನಿದಪ ನಾಟಕ ನಡೆಯಿತು.