ಬಂಟ್ವಾಳ: ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ವತಿಯಿಂದ, ಸುನ್ನೀ ಮಹಲ್ ಎಜುಕೇಶನ್ ಸೆಂಟರ್ ಕಯ್ಯೂರು, ಮಂಚಿ ಇದರ ದಶಮಾನೋತ್ಸವದ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಅವರ ಸಹಾಯಕರಿಗೆ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಬುಧವಾರ ಈದ್ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು.
ಸುನ್ನೀ ಮಹಲ್ ಎಜುಕೇಶನ್ ಸೆಂಟರ್ನ ಸಂಸ್ಥಾಪಕ ಸಿ.ಎಂ. ಅಬೂಬಕ್ಕರ್ ಲತೀಫಿ ರೋಗಿಗಳಿಗೆ ಈದ್ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ದುವಾ ಪ್ರಾರ್ಥನೆ ನೆರವೇರಿಸಿ ಎಲ್ಲಾ ರೋಗಿಗಳು ರೋಗ ಮುಕ್ತರಾಗುವಂತೆ ಪ್ರಾರ್ಥಿಸಿದರು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕ ಇಬ್ರಾಹಿಂ ಕರೀಂ ಮಾತನಾಡಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಪ್ರತೀ ವರ್ಷ ಈದ್ ಪುಡ್ ವಿತರಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಹಾಗೂ ಅಸಹಯಕರಿಗೆ ನೆರವಾಗುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಈ ದೇಶದಲ್ಲಿ ಶಾಂತಿ ಸಹಬಾಳ್ವೆ, ಸೌಹಾರ್ಧತೆಯನ್ನು ಉಳಿಸಿ, ಬೆಳೆಸಬೇಕೆನ್ನುವ ಉದ್ದೇಶದಿಂದ ಹಾಗೂ ಈದ್ ಹಬ್ಬದ ಸಂಭ್ರಮವನ್ನು ಸಂಭ್ರಮಿಸುವ, ಜೊತೆಗೆ ಆಸ್ಪತ್ರೆಯ ರೋಗಿಗಳ ನೋವಿನೊಂದಿಗೂ ನಾವು ಸೇರಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈದ್ ಪುಡ್ ವಿತರಣ ಕಾರ್ಯಕ್ರಮ ನಡೆರಸಿಕೊಂಡು ಬಂದಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಮಂಚಿಯ ಕೈಯ್ಯೂರು ಎನ್ನುವ ಪುಟ್ಟ ಊರಲ್ಲಿ ಸುನ್ನೀ ಮಹಲ್ ಎಜುಕೇಶನ್ ಸೆಂಟರ್ ಎನ್ನುವ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿಕೊಂಡು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಸಂಸ್ಥೆ ನೀಡಿಕೊಂಡು ಬರುತ್ತಿದೆ ಎಂದರು.
ಸುನ್ನಿ ಮಹಲ್ ಎಜುಕೇಶನ್ ಸೆಂಟರ್ ಕಯ್ಯೂರು ಇದರ ವಿದ್ಯಾರ್ಥಿ ರವೂಪ್ ಮಾತನಾಡಿ ಸುನ್ನಿಮಹಲ್ ವಿದ್ಯಾಸಂಸ್ಥೆ ಆರಂಭಗೊಂಡು ಹತ್ತು ವರ್ಷ ಪೂರೈಸುತ್ತಿದ್ದು ಇಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಎಂದರು.
ಬಂಟ್ವಾಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಶುಭ ಹಾರೈಸಿದರು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಝಕರಿಯಾ ನಾರ್ಶ, ಕೋಶಾಧಿಕಾರಿ ಲತೀಪ್ ಪರ್ತಿಪ್ಪಾಡಿ, ಸುನ್ನೀ ಮಹಲ್ ಎಜುಕೇಶನ್ ಸೆಂಟರ್ನ ಕಾರ್ಯದರ್ಶಿ ರಝಾಕ್ ಭಾರತ್, ಎಸ್ಎಸ್ಎಫ್ ಬಂಟ್ವಾಳ ವಿಭಾಗದ ನಾಯಕರಾದ ಮಜೀದ್ ಕಲ್ಕಾರ್ ಹಾಗೂ ಹಮೀದ್ ಕಲ್ಕಾರ್, ಜಿಸ್ತಿ ಸಮಿತಿ ಸುನ್ನಿ ಮಹಲ್ ಕೈಯ್ಯೂರು ಸದಸ್ಯ ಝುಬೈರ್ ಸಂಪಿಲ ಮತ್ತಿತರರು ಉಪಸ್ಥಿತರಿದ್ದರು.