![](https://aksharanews.in/wp-content/uploads/2024/04/F3E5B605-85DB-4263-9181-5EB71AD4E732-576x1024.jpeg)
ಬಂಟ್ವಾಳ: ವಿದ್ಯಾಭ್ಯಾಸದ ಬಳಿಕ ತಾನು ಈ ಉದ್ಯೋಗ ಪಡೆಯಬೇಕು, ಇಂತಹ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು, ಸ್ವ ಉದ್ಯೋಗ ಮಾಡಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ಇರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ತಾನು ಆಟೋ ಚಾಲಕಿಯಾಗಬೇಕು ಎಂದು ಬಯಸಿ, ಆಟೋ ಚಾಲನೆಯ ತರಬೇತಿ ಪಡೆದು, ರಿಕ್ಷಾ ಖರೀದಿಸಿ ಇಂದು ಯಶಸ್ವಿ ಆಟೋ ಚಾಲಕಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಗ್ರಾರ್ ಬಳಿಯ ಮಡ್ಯಾರ್ ನಿವಾಸಿ ವನಿತಾ ಕುಲಾಲ್ ಈ ಸಾಧನೆಯನ್ನು ಮಾಡಿದವರು. ಗಂಡು ದಿಕ್ಕಿಲ್ಲದೆ, ಬಡತನದಿಂದ ನಲುಗಿ ಹೋಗಿದ್ದ ತನ್ನ ಕುಟುಂಬಕ್ಕೆ ಆರ್ಥಿಕ ಚೈತನ್ಯ ತುಂಬಲು ವನಿತಾ ಆಟೋ ಚಾಲಕಿಯಾಗಿ, ಮಹಿಳೆ ಮನಸ್ಸು ಮಾಡಿದರೆ ಪುರುಷ ಕೇಂದ್ರಿತವಾಗಿರುವ ಈ ಕ್ಷೇತ್ರದಲ್ಲೂ ಶ್ರಮಿಸಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2024/04/325B6DF2-ADCA-42AD-88CE-92EB73702AE8-1024x1024.jpeg)
ಬಂಟ್ವಾಳದ ಅಗ್ರಾರ್ ಬಳಿಯ ಮಡ್ಯಾರಿನ ತಿಮ್ಮಪ್ಪ ಮೂಲ್ಯ ಹಾಗೂ ವೀರಮ್ಮ ಕುಟುಂಬದ ನಾಲ್ಕು ಮಕ್ಕಳ ಪೈಕಿ ವನಿತಾ ಕೊನೆಯವರು. ಕುಟುಂಬಕ್ಕೆ ಆಧಾರವಾಗಬೇಕಿದ್ದ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿಯೇ ದ್ವಿತೀಯ ಪಿಯುಸಿಯವರೆಗೆ ವಿದ್ಯಾಭ್ಯಾಸ ಪಡೆದು ಬಡತನದಿಂದಾಗಿ ಮತ್ತೆ ಶಿಕ್ಷಣ ಮುಂದುವರೆಸಲಾಗದೆ ಕೆಲ ವರ್ಷಗಳ ಕಾಲ ಬಂಟ್ವಾಳದ ಜವಳಿ ಅಂಗಡಿಯಲ್ಲಿ ಕೆಲಸ ಮಾಡಿದರು. ತೀವ್ರ ಆನಾರೋಗ್ಯದಿಂದ ತಾಯಿಯೂ ಇಹಲೋಕ ತ್ಯಜಿಸಿದಾಗ ಮನೆ ನಿಭಾಯಿಸುವ ಜವಬ್ದಾರಿ ವನಿತಾ ಅವರ ಹೆಗಲಿಗೆ ಬಿತ್ತು.
![](https://aksharanews.in/wp-content/uploads/2024/04/4A7FED22-345F-4756-B369-2EC6D61B07A4-1024x485.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ರಿಕ್ಷಾ ಚಾಲನೆಯ ತರಬೇತಿ:
ತಾನು ರಿಕ್ಞಾ ಚಾಲಕಿಯಾಗಬೇಕೆನ್ನುವ ಹಂಬಲ ವ್ಯಕ್ತಪಡಿಸಿದ ವನಿತಾ ಅವರಿಗೆ ಪದವಿನಂಗಡಿಯ ಅಶೋಕ್ ಎಂಬವರು ರಿಕ್ಷಾ ಚಲಾಯಿಸುವ ತರಬೇತಿ ನೀಡಿದ್ದರು. ಶ್ರದ್ಧೆಯಿಂದ ತರಬೇತಿ ಪಡೆದು ಲೈಸೆನ್ಸ್ ಮಾಡಿಸಿಕೊಂಡರು. ಸಾಲ ಮಾಡಿ ರಿಕ್ಷಾವನ್ನು ಖರೀದಿಸಿ ವೃತ್ತಿ ಆರಂಭಿಸಿಯೇ ಬಿಟ್ಟರು. ಆರಂಭದಲ್ಲಿ ಸ್ವಲ್ಪ ಎಡರು ತೊಡರುಗಳು ಅನುಭವಿಸಿದರೂ ಸ್ಥಳೀಯ ರಿಕ್ಷಾ ಚಾಲಕರು ಸೇರಿದಂತೆ ಮನೆಮಂದಿಯ ಪ್ರೋತ್ಸಾಹ ಸಿಕ್ಕಿ ಈ ವೃತ್ತಿಯಲ್ಲಿ ಯಶಸ್ಸು ಕಂಡುಕೊಂಡು ಬಂಟ್ವಾಳದ ಮೊದಲ ಮಹಿಳಾ ರಿಕ್ಷಾ ಚಾಲಕಿಯೆನಿಸಿಕೊಂಡರು. ಕಳೆದ ೪ ವರ್ಷಗಳೀದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅನಿವಾರ್ಯ ಬಾಡಿಗೆಗಳಿದ್ದಾಗ ಮಧ್ಯರಾತ್ರಿಯಲ್ಲೂ ಸೇವೆ ನೀಡುವ ಇವರು ಬಡವರು, ವೃದ್ಧರು, ರೋಗಿಗಳಿಗೆ ಉಚಿತ ಸೇವೆಯನ್ನು ನೀಡುತ್ತಾರೆ. ಪತಿ ಯೋಗಿಶ್ ಅವರ ಸಹಕಾರದಿಂದಾಗಿ ಪ್ರಸ್ತುತ ಒಂಭತ್ತು ತಿಂಗಳ ಮಗು ಇದ್ದರೂ ಕೂಡ ತನ್ನ ವೃತ್ತಿ ಧರ್ಮ ಪಾಲಿಸುವ ಇವರು ಯಾವ ಕ್ಷಣದಲ್ಲೂ, ಎಷ್ಟು ದೂರ ಬಾಡಿಗೆಗೆ ಕರೆ ಬಂದಾಗಲೂ ರಿಕ್ಷಾದೊಂದಿಗೆ ಗ್ರಾಹಕರ ಮುಂದೆ ಪ್ರತ್ಯಕ್ಷರಾಗುತ್ತಾರೆ.
![](https://aksharanews.in/wp-content/uploads/2024/01/aksharanews-ad.jpg)