ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶವಾದ ಸಜೀಪಮೂಡ ಗ್ರಾಮದಲ್ಲಿ ಸ್ಥಾಪನೆಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕನಿಷ್ಠ ಅವಧಿಯಲ್ಲಿಯೇ ಗರಿಷ್ಠ ಸಾಧನೆಯನ್ನು ಮಾಡಿಕೊಂಡು ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿಕೊಂಡು ಮುನ್ನಡೆಯುತ್ತಿದೆ. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮುಂದಾಳತ್ವದಲ್ಲಿ, ಅನುಭವಿ ನಿರ್ದೇಶಕರ ಮಾರ್ಗದರ್ಶನದಲ್ಲಿ, ಕ್ರಿಯಾಶೀಲ ಸಿಬ್ಬಂದಿಗಳ ಸಹಕಾರದೊಂದಿಗೆ ಸಂಘ ಲಾಭದಾಯಕವಾಗಿ ಪ್ರಗತಿಯ ಹೆಜ್ಜೆ ಇಟಿದ್ದು ಸಂಘದ 14ನೇ ಶಾಖೆ ಉದ್ಘಾಟನೆಗೆ ಸಜ್ಜುಗೊಂಡಿದೆ.
ಮಾ.31ರಂದು ಭಾನುವಾರ ಬೆಳಿಗ್ಗೆ 9.30ಗಂಟೆಗೆ ಸರಿಯಾಗಿ ಬಂಟ್ವಾಳ ತಾಲೂಕು ಕೇಂದ್ರವಾದ ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಜಿ.ಕೆ. ಸ್ಮಾರ್ಟ್ ಸಿಟಿ ಕಟ್ಟಡದ ಒಂದನೇ ಮಹಡಿಯಲ್ಲಿ ಸಂಘದ ನೂತನ 14ನೇ ಶಾಖೆಯನ್ನು ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ತೀರ್ಥಾಧಿಪತಿ, ಹೊಸ್ಮಾರು ಬಲ್ಯೊಟ್ಟು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡಿನ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ, ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ ಪೂಜಾರಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ವಕೀಲ ಅರುಣ್ ರೋಶನ್ ಡಿಸೋಜ, ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಹಂಝ ಬಸ್ತಿಕೋಡಿ ಭಾಗವಹಿಸುವರು.
ಮೂರ್ತೆದಾರಿಕೆ ಮಾಡುವ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುಧಾರಿಸುವ ಸದುದ್ದೇಶದೊಂದಿಗೆ 1991ರಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡ ಸಂಘ, 2005 ನವೆಂಬರ್ 18 ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿತು. ಬಂಟ್ವಾಳ ತಾಲೂಕಿನ ಎಲ್ಲಾ ಭಾಗಗಳಲ್ಲಿರುವ ಮೂರ್ತೆದಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಹಂತ ಹಂತವಾಗಿ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ. ಕಾವಳಮುಡೂರು ಎನ್.ಸಿ.ರೋಡು,ಸಾಲೆತ್ತೂರು, ಕಂಬಳಬೆಟ್ಟು, ಪುಣಚ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಬೋಳಂತೂರು ಹಾಗೂ ಮಾರ್ನಬೈಲು ಶಾಖೆಗಳು ವಿಶಾಲವಾದ ಸುಸಜ್ಜಿತ ಕಚೇರಿಗೆ ಸ್ಥಳಾಂತರಗೊಂಡಿದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲವನ್ನು ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಿಗೆ 0.5% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, ಸಿದ್ದಕಟ್ಟೆ ಹಾಗೂ ಪುಣಚ ಶಾಖೆಯಲ್ಲಿ ಇ- ಸ್ಟ್ಯಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದು, ಬಿ.ಸಿ ರೋಡ್ ಶಾಖೆಯಲ್ಲಿ ಈ ಸ್ಟ್ಯಾಂಪಿಂಗ್ ಸೌಲಭ್ಯವಿರುತ್ತದೆ.
ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ನೀಡುವ ಯೋಜನೆಯನ್ನು ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಸಂಘದ ವತಿಯಿಂದ ಒಬ್ಬ ಬಡ ಕುಟುಂಬದ ವಿದ್ಯಾರ್ಥಿಯನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ಸ್ವೀಕರಿಸಲಾಗಿದೆ.
ಪ್ರಸ್ತುತ ಒಟ್ಟು 14074 ಸದಸ್ಯರನ್ನು ಹೊಂದಿ 225 ಕೋಟಿ ರೂಪಾಯಿ ವ್ಯಾಪರ ವಹಿವಾಟನ್ನು ನಡೆಸಿದೆ. ಕಳೆದ ಸಾಲಿನಲ್ಲಿ 17,22,007.65
ರೂಪಾಯಿ ವಾರ್ಷಿಕ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗಿದೆ. 34 ಕೋಟಿ ರೂಪಾಯಿ ಸಾಲ ನೀಡಿದ್ದು, 39ಕೋಟಿ ರೂಪಾಯಿ ಠೇವಣಾತಿ ಇದೆ. 30,43,550 ಷೇರುಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ವೇಣೂರಿನಲ್ಲಿ ಹೊಸ ಶಾಖೆ ಆರಂಭಗೊಳ್ಳಲಿದ್ದು ಇದರ ಜೊತೆಗೆ ಇನ್ನಷ್ಟು ಹೊಸ ಶಾಖೆಗಳನ್ನು ಕಾರ್ಯವ್ಯಾಪ್ತಿಯಲ್ಲಿ ತೆರೆಯುವ ಯೋಜನೆಯನ್ನು ಸಂಘ ಹೊಂದಿದೆ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಿಂದ ಮೊದಲ್ಗೊಂಡು ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘ ಅವಕಾಶ ನೀಡಿದೆ. ಹಾಗೂ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ:
ನಮ್ಮ ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಸಜೀಪಮೂಡ ಗ್ರಾಮದ ಸುಭಾಷ್ನಗರದಲ್ಲಿ 0.50 ಎಕ್ರೆ ಜಮೀನು ಖರೀದಿಸಲಾಗಿದ್ದು, ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ಪ್ರಶಸ್ತಿಗಳ ಗೌರವ:
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಾಧನೆಯನ್ನು ಗುರುತಿಸಿ ಹಲವಾರ ಪ್ರಶಸ್ತಿಗಳು ಅರಸಿ ಬಂದಿದ್ದು ಸಂಘದ ಕೀರ್ತಿಯನ್ನು ಹೆಚ್ಚಿಸಿದೆ. ೬೩ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಉತ್ತಮ ಸಹಕಾರಿ ಸಂಘ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು 2022-23ನೇ ಸಾಲಿನ ಮಹಾಸಭೆಯಲ್ಲಿ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ. ಇದರ ವತಿಯಿಂದ ಅತ್ಯುತ್ತಮ ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಸಂಘ 2022-23 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಯುವವಾಹಿನಿ ಸಾಧನ ಶ್ರೇಷ್ಠ ಪ್ರಶಸ್ತಿ 2023ನ್ನು ನೀಡಿ ಗೌರವಿಸಿದೆ.
ಪ್ರಸ್ತುತ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಶ್ರೀಮತಿ ಕೆ. ಸುಜಾತ ಎಂ., ಶ್ರೀಮತಿ ವಾಣಿವಸಂತ, ಅರುಣ್ ಕುಮಾರ್ ಎಂ. ಆಶೀಶ್ ಪೂಜಾರಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮಮತಾ ಜಿ. ಹಾಗೂ ಸಿಬ್ಬಂದಿ ವರ್ಗ ಸಂಘವನ್ನು ಮುನ್ನಡೆಸುತ್ತಿದ್ದಾರೆ.