
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ನೇತ್ರಾವತಿ ನದಿ ಕಿನಾರೆಯಲ್ಲಿ ಅನುಷ್ಠಾನಗೊಂಡಿರುವ ಏತನೀರಾವರಿ ಯೋಜನೆಯ ಮೂಲಕ ಪ್ರಸ್ತುತ ಸೀಮಿತ ಪ್ರದೇಶಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು ಇದನ್ನು ಸ್ಥಳೀಯ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಹೈ ಸ್ಫೀಡ್ ಪಂಪ್ ಅಳವಡಿಕೆ ಹಾಗೂ ಹೊಸ ಪೈಪ್ ಲೈನ್ ಅಳವಡಿಸುವಂತೆ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈಯವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.


ಮಡಿವಾಳಪಡ್ಪು ಕೂಸನಕಟ್ಟೆಯ ಪಂಪ್ ಹೌಸ್ ಬಳಿ ನಡೆದ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ಸಭೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ಪಾಲ್ಗೊಂಡಿದ್ದು ಸಂಘದ ಅಧ್ಯಕ್ಷ ಮಹೇಶ್ ನಾಯಕ್ ಸ್ವಾಗತಿಸಿ, ವಿಷಯ ಪ್ರಸ್ತಾಪಿಸಿದರು. ಸಂಘದ ಉಪಾಧ್ಯಕ್ಷ ಅಣ್ಣಪ್ಪಯ್ಯ ಪ್ರಸ್ತಾವಿಸಿ ತಮ್ಮ ಬೇಡಿಕೆಯ ಉದ್ದೇಶವನ್ನು ತಿಳಿಸಿದರು. ಈ ಸಂದರ್ಭ ಸ್ಥಳೀಯ ಕೃಷಿಕರ ಬೇಡಿಕೆಗೆ ಸ್ಪಂದಿಸಿದ ಬಿ. ರಮಾನಾಥ ರೈ ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿ ಈ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಸೂಚಿಸಿದರು. ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಕರೆಯಿಸಿ ರೈತರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,
ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ, ಸಜೀಪಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಯೂಸುಫ್ ಕರಂದಾಡಿ, ಪರಮೇಶ್ವರ ಎಂ. ಸದಸ್ಯ ಧನಂಜಯ್ ಶೆಟ್ಟಿ ಪರಾರಿ ಪ್ರಮುಖರಾದ ಹರೀಶ್ ಗಟ್ಟಿ,ಕೃಷ್ಣಪ್ಪ ಮಡಿವಾಳ ಪಡ್ಪು, ಭೋಜ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀನಿವಾಸ್ ವಂದಿಸಿದರು.

Advertisement







