
ರೋಟರಿ ಕ್ಲಬ್ ಬಂಟ್ವಾಳ ಇದರ ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲಾ ಇಂಟರಾಕ್ಟ್ ಸಂಯೋಜಕ ಡಾ. ಜಯಕುಮಾರ್ ಶೆಟ್ಟಿ ಮಾತನಾಡಿ
ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವವನ್ನು ಹೆಚ್ಚಿಸುತ್ತದೆ. ನಾಯಕತ್ವದ ಜೊತೆಗೆ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಸಂವಹನ ಕಲೆಯನ್ನು ಕಲಿಸುತ್ತದೆ. ಇಂಟರಾಕ್ಟ್ ಕೇವಲ ಮೀಟಿಂಗ್ ಮಾಡಲು ಇರುವ ಕ್ಲಬ್ ಅಲ್ಲ ಬದಲಾಗಿ ನಮ್ಮ ಯೋಚನೆಗಳನ್ನು ವಿಶಾಲ ಗೊಳಿಸಲು, ನಮ್ಮ ಕೈಗಳನ್ನು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇರುವ ವೇದಿಕೆ ಎಂದು ಅಭಿಪ್ರಾಯ ಪಟ್ಟರು.

ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ತಾಲೂಕಿನ 13 ಶಾಲೆಗಳ ಇಂಟರಾಕ್ಟ್ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರತಿಜ್ಞಾವಿಧಿ ಭೋದಿಸಿದರು. ಅವರು ಮಾತನಾಡಿ ಸಣ್ಣ ಸಣ್ಣ ಯೋಜನೆಗಳ ಮೂಲಕ ಉತ್ತಮವಾದ ಕೆಲಸವನ್ನು ಮಾಡಲು ಸಾಧ್ಯವಿದೆ. ಅರ್ಪಣಾ ಮನೋಭಾವ ಇಲ್ಲದೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಸಕರಾತ್ಮಕ ಚಿಂತನೆಯೊಂದಿಗೆ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.


ಇಂಟರಾಕ್ಟ್ ಕ್ಲಬ್ ಜಿಲ್ಲಾ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ್ದ ಲಿಖಿತಾ ಅನಿಸಿಕೆ ವ್ಯಕ್ತಪಡಿಸಿ ಇಂಟರಾಕ್ಟ್ ನಲ್ಲಿ ಕೇವಲ ಸದಸ್ಯರಾಗಿರುವುದು ಮಾತ್ರವಲ್ಲ, ಎಲ್ಲಾ ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು ಎಂದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರವಿರಾಜ್ ಶೆಟ್ಟಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.
Advertisement







