ಬಂಟ್ವಾಳ: ಜಾತಿ ಸಮುದಾಯಗಳ ಬಗ್ಗೆ ಅವಹೇಳನ ಮಾಡಿದ ಅನಿತಾ ಕಾಸರಗೋಡು ಎಂಬುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಆಗ್ರಹಿಸಿ ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.ಕೇರಳ ರಾಜ್ಯದ ಕಾಸರಗೋಡು ನಿವಾಸಿ ಅನಿತಾ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಬಲ ಜಾತಿ ಸಮುದಾಯಗಳ ಬಗ್ಗೆ ಮನಬಂದಂತೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಬಿಲ್ಲವ ಜಾತಿ ಹಾಗೂ ಬಂಟ ಜಾತಿಯ ಬಗ್ಗೆ ಕೆಟ್ಟ ಶಬ್ದಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ . ಈ ಬಗ್ಗೆ ಪ್ರಶ್ನಿಸಿದರೆ ಮತ್ತೆ ಮುಂದುವರಿದು ಯಾವುದೆ ಕಾನೂನು ,ನಿಯಮಗಳನ್ನು ಲೆಕ್ಕಿಸದೇ ಬಿಲ್ಲವ ಸಮುದಾಯದ ಬಗ್ಗೆ ಆವ್ಯಾಚ್ಚ ಪದಗಳಿಂದ ನಿಂದಿಸಿರುತ್ತಾರೆ .ಒಂದು ಧರ್ಮವನ್ನು ಓಲೈಕೆ ಮಾಡಿಕೊಂಡು ಬಿಲ್ಲವ, ಬಂಟ್ಸ್ ಜಾತಿ ಸಮುದಾಯವನ್ನು ನಿಂದಿಸುವ ಈ ಮಹಿಳೆಯ ಕುರಿತು ಸಾರ್ವಜನಿಕರಲ್ಲಿ ಅನುಮಾನ ಉಂಟಾಗಿದ್ದು ಇವರ ಬಗ್ಗೆ ಪೂರ್ವಪರ ತನಿಖೆಯಾಗಬೇಕು.ಯಾವುದೇ ಒಬ್ಬ ವ್ಯಕ್ತಿಯಿಂದ ತೊಂದರೆಗೆ ಒಳಗಾದರೆ ಆ ವ್ಯಕ್ತಿಯ ಬಗ್ಗೆ ವೈಯಕ್ತಿಕ ನಿಂದನೆ ಮಾಡಬೇಕೇ ಹೊರತು ವ್ಯಕ್ತಿಗೆ ಸಂಬಂಧಿಸಿದ ಸಮುದಾಯದ ಬಗ್ಗೆ ಅವಹೇಳನ ಮಾಡುವುದು ಕಾನೂನು ಅಪರಾಧ ಹಾಗೂ ಸಮಾಜದ್ರೋಹಿ ವಿಚಾರವಾಗಿದೆ .ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಗೌರವ ಮತ್ತು ಸಂಪ್ರದಾಯಗಳಿರುವ ಈ ಕಾಲಘಟ್ಟದಲ್ಲಿ ಇಂತಹ ವ್ಯಕ್ತಿಗಳಿಂದ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಅವಹೇಳನ ಮಾಡುವುದು ಕಾನೂನು ಬಾಹಿರ ಕೃತ್ಯವಾಗಿದೆ.
ಈ ನಿಟ್ಟಿನಲ್ಲಿ ನೆರೆ ರಾಜ್ಯ ಕೇರಳ ಪೋಲಿಸ್ ಮಹಾನಿರ್ದೇಶಕರೊಂದಿಗೆ ಸಮನ್ವಯ ಮಾಡಿಕೊಂಡು ಈ ಸಮಾಜ ಘಾತುಕ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕಾಗಿ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.


Advertisement







