![](https://aksharanews.in/wp-content/uploads/2024/06/708CB562-6477-4CF1-8B62-18CD0C06F0DC-1024x485.jpeg)
ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿಯ ಹಿಂಭಾಗದಲ್ಲಿ ಮಳೆ ನೀರು ಸಂಗ್ರಹಗೊಂಡು ದಿಢೀರ್ ಕೃತಕ ನೆರೆ ಸೃಷ್ಟಿಯಾಗಿದೆ. ಮಳೆ ನೀರು ಹರಿದು ಹೋಗುವ ಚರಂಡಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಮಣ್ಣು ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ಈ ಅವಾಂತರ ಉಂಟಾಗಿದೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಸ್ಥಳೀಯರಿಗೆ ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2024/06/0235E321-DC1B-4D40-AB9A-923B7366B425-1024x485.jpeg)
ಕೈಕುಂಜೆಯ ಮೆಸ್ಕಾಂ ಕಚೇರಿಯ ಹಿಂಭಾಗ ತಗ್ಗು ಪ್ರದೇಶವಿದೆ. ಇಲ್ಲಿ ಸುಮಾರು ಹದಿನೈದಕ್ಕಿಂತಲೂ ಅಧಿಕ ವಾಸ್ತವ್ಯದ ಮನೆಗಳಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸಾಧರಣ ಮಳೆಗೆ ಈ ಪ್ರದೇಶದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ಒಂದೆರಡು ಜೋರು ಮಳೆಯಾದರಂತೂ ನೀರೆಲ್ಲ ಸ್ಥಳೀಯ ಮನೆಗಳಿಗೆ ನುಗ್ಗುವ ಆತಂಕವೂ ಇದೆ. ಈವರೆಗೆ ಮಳೆಗಾಲದಲ್ಲಿ ಇಲ್ಲದ ಸಮಸ್ಯೆ ಈ ಬಾರಿ ಹೇಗೆ ಉಂಟಾಯಿತು? ಎನ್ನುವ ಆತಂಕ ಸ್ಥಳೀಯರನ್ನು ಕಾಡಲಾರಂಭಿಸಿದೆ. ಮನೆ ಮುಂದೆಯೇ ನೀರು ನಿಂತು ಅದರಲ್ಲಿ ಪ್ಲಾಸ್ಟಿಕ್, ತ್ಯಾಜ್ಯಗಳು, ಕೊಳಚೆ ಸೇರಿಕೊಂಡು ದುರ್ವಾಸನೆ ಬೀರುತ್ತಿದೆ.
![](https://aksharanews.in/wp-content/uploads/2024/06/CA595548-3262-452B-80FD-BB253128A21F-1024x768.jpeg)
ಹೆದ್ದಾರಿ ಕಾಮಗಾರಿ ಅವಾಂತರವೇ?
ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ಸ್ಥಳೀಯರ ಆರೋಪ. ಈ ಹಿಂದೆ ಈ ಭಾಗದ ಮಳೆ ನೀರೆಲ್ಲಾ ಚರಂಡಿಯ ಮೂಲಕ ಲಯನ್ಸ್ ಕ್ಲಬ್ ಹಿಂಭಾಗ ಹರಿದು ರಾಜಕಾಲುವೆಯ ಮೂಲಕ ನದಿಯನ್ನು ಸೇರುತ್ತಿತ್ತು. ಈಗ ರಾಷ್ಟ್ರೀಯ ಹೆದ್ದಾರಿಯ ಕೆಲಸ ನಡೆಯುತ್ತಿದ್ದು ಮಳೆಗೆ ಅದರ ಮಣ್ಣೆಲ್ಲಾ ಚರಂಡಿಯಲ್ಲಿ ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ಇಲ್ಲಿಯೇ ನಿಂತಿದೆ. ಸ್ಥಳೀಯ ಗುತ್ತಿಗೆದಾರರೊಬ್ಬರು ಸಣ್ಣ ಹಿಟಾಚಿ ತಂದು ಹೂಳು ಬಿಡಿಸಿಕೊಟ್ಟು ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗದೆ ವಾಪಸ್ಸಾಗಿದ್ದಾರೆ ಎಂದು ತಿಳಿದು ಬಂದಿದೆ. ಕೃತಕ ನೆರೆಯ ಬಗ್ಗೆ ಸ್ಥಳೀಯರು ಬಂಟ್ವಾಳ ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದು ಅವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಕೆಎನ್ಆರ್ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
![](https://aksharanews.in/wp-content/uploads/2024/06/12033F40-32D2-46BF-922B-06974103A8B1-1024x485.jpeg)
ಸಾಂಕ್ರಾಮಿಕ ರೋಗದ ಭೀತಿ:
ಮಳೆ ಬಿಸಿಲಿನ ಆಟಕ್ಕೆ ಡೆಂಘೆ, ಮಲೇರಿಯಾದಂತಹ ಮಾರಣಾಂತಿಕ ಸಾಂಕ್ರಮಿಕ ರೋಗಳು ಹೆಚ್ಚಾಗುತ್ತಿದೆ. ಇಲ್ಲಿ ನೀರು ಹರಿದು ಹೋಗದೆ ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ರೋಗಳು ಹರಡುವ ಆತಂಕ ಎದುರಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚರಂಡಿಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ದೊಡ್ಡ ಕಾರ್ಯಚರಣೆಯೇ ಆಗಬೇಕಿದೆ.
—
![](https://aksharanews.in/wp-content/uploads/2024/01/aksharanews-ad.jpg)