ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ತಾಲೂಕು ಘಟಕ ಇದರ ಪ್ರಥಮ ವಾರ್ಷಿಕೋತ್ಸವ ಮಂಗಳವಾರ ಸಂಜೆ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ತಾನೊಬ್ಬ ಕಲಾವಿದನಾಗಿ ತನ್ನೊಂದಿಗಿರುವ ಕಲಾವಿದರ ಬಗ್ಗೆ ಚಿಂತನೆ ಮಾಡುವುದರ ಜೊತೆಗೆ ಕಷ್ಟದಲ್ಲಿರುವ ಕಲಾವಿದರಿಗೆ ಸ್ಪಂದಿಸುವ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು. ಪಟ್ಲ ಫೌಂಡೇಶನ್ ವತಿಯಿಂದ ಬಡ ಕಲಾವಿದರಿಗಾಗಿ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ಘೋಷಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಯಕ್ಷಗಾನ ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಲೆ. ಪಟ್ಲ ಸತೀಶ್ ಶೆಟ್ಟಿಯವರು ಅವರಿಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಆ ಮೂಲಕ ಬಡ ಹಾಗೂ ಅಶಕ್ತ ಕಲಾವಿದರಿಗೆ ತನ್ನ ಕೈಲಾಗುವ ಸೇವೆ ನೀಡುತ್ತಿದ್ದಾರೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ದೇಶ, ವಿದೇಶಗಳಲ್ಲಿ ಫೌಂಡೇಷನ್ನ ಘಟಕಗಳು ಕಾರ್ಯ ನಿರ್ವಹೊಸುತ್ತಿದೆ. 28 ಕಲಾವಿದರಿಗೆ ಮನೆಗಳು ನಿರ್ಮಾಣಗೊಳ್ಳುತ್ತಿದೆ, 300 ಮಂದಿ ಕಲಾವಿದರಿಗೆ ಧನಸಹಾಯ, 4 ಸಾವಿರ ಕಲಾವಿದರಿಗೆ ವಿಮಾ ಯೋಜನೆ, 40 ಸರಕಾರಿ ಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ಈವರೆಗೆ ರೂ.12 ಕೋಟಿಯವರೆಗೆ ಕಲಾವಿದರಿಗೆ ಸಹಾಯ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಟ್ಯ ವೈದ್ಯೆ ಮೀನಾಕ್ಷಿ ಆಚಾರ್ಯ, ಹಿರಿಯ ರಂಗಭೂಮಿ ಕಲಾವಿದ ರಮಾ ಬಿ.ಸಿ.ರೋಡು, ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಚಾಲಕ ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು. ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ರಾಜೇಶ್ ಆಚಾರ್ಯ ಫರಂಗಿಪೇಟೆ, ಟಿ.ಶೇಷಪ್ಪ ಮೂಲ್ಯ ಸನ್ಮಾನ ಪತ್ರ ವಾಚಿಸಿದರು, ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಾವಂಜೆ ಮೇಳದಿಂದ ಅಯೋಧ್ಯ ದೀಪ ಯಕ್ಷಗಾನ ನಡೆಯಿತು.