ಬಂಟ್ವಾಳ: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಬುಧವಾರ ಬಿ.ಸಿ.ರೋಡಿನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಅವರ ಕಾಲಿಗೆ ಅಡ್ಡ ಬಿದ್ದು ಆಶೀರ್ವಾದ ಪಡೆದುಕೊಂಡರು.
ಕೆಲ ಹೊತ್ತುಗಳ ಕಾಲ ಚರ್ಚೆ ನಡೆಸಿದ ಪದ್ಮರಾಜ್ ಅವರಿಗೆ ಜನಾರ್ದನ ಪೂಜಾರಿಯವರು ಜಾತಿ, ಧರ್ಮ ನೋಡದೆ ಬಡವರ ಸೇವೆ ಮಾಡಿ, ಕುದ್ರೋಳಿ ಗೋಕರ್ಣನಾಥೇಶ್ವರ ನಿಮ್ಮ ಕೈ ಬಿಡುವುದಿಲ್ಲ ಎಂದು ಆಶೀರ್ವಾದ ಮಾಡಿದರು. ಮನೆ ಮನೆ ತೆರಳಿ ಪದ್ಮರಾಜ್ ಪರವಾಗಿ ಮತಯಾಚಿಸಿ ಅವರನ್ನು ಗೆಲ್ಲಿಸುವ ಜವಬ್ದಾರಿ ನಿಮ್ಮದು ಎಂದು ಅಲ್ಲಿ ನೆರೆದಿದ್ದ ಪಕ್ಷದ ಪ್ರಮುಖರು ಹಾಗೂ ಕಾಯಕರ್ತರಿಗೆ ತಿಳಿಸಿದರು.
ಈ ಸಂದರ್ಭ ಪದ್ಮರಾಜ್ ಆರ್. ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಜನಾರ್ದನ ಪೂಜಾರಿಯವರೇ ಪ್ರೇರಣೆ. ಬಡವರ ಸೇವೆ ಮಾಡಲು ಇಲ್ಲಿ ಸಾಧ್ಯವಿದೆ ಎನ್ನುವ ನಂಬಿಕೆಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಜನರ್ದಾನ ಪೂಜಾರಿಯವರು ಕೇಂದ್ರ ಸಚಿವರಾಗಿದ್ದಾಗ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ದೇಶಾದ್ಯಂತ ಜನರು ಈಗಲೂ ನೆನೆಯುತ್ತಾರೆ, ಅವರು ಈಗಲೂ ನನಗೆ ಬಡವರ ಸೇವೆ ಮಾಡಿ ಎಂದು ಹೇಳಿದ್ದಾರೆ. ಅವರ ಆಸೆ ಆಕಾಂಕ್ಷೆಯನ್ನು, ಅವರು ಕಂಡು ಕೊಂಡಿದ್ದ ಕನಸುಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭ ಬೂಡ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಸುರೇಶ್ ಜೋರಾ, ಪಕ್ಷದ ಪ್ರಮುಖರಾದ ಸುನೀಲ್ ಬಜಿಲ ಕೇರಿ, ಅಪ್ಪಿ, ದೀಪಕ್ ಪೆರ್ಮುದೆ, ದೀಪಕ್ ಪಿಲಾರ್, ಮಧುಸೂದನ್ ಶೆಣೈ, ದಿನೇಶ್ ಶೆಟ್ಟಿ, ನಿತಿನ್ ಬೆಳುವಾಯಿ, ಪ್ರವೀಣ್ ಫರಂಗಿಪೇಟೆ ಮೊದಲಾದವರು ಉಪಸ್ಥಿತರಿದ್ದರು.