ಬಂಟ್ವಾಳ: ಶಾಲಾ ರಜಾ ದಿನದಲ್ಲಿ ಬಿ.ಸಿ.ರೋಡಿನ ಮತ್ಸ್ಯಸಾಗರ ಹೊಟೇಲ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 590 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಪದ್ಮನಾಭ ಹಾಗೂ ಹೇಮಾವತಿ ದಂಪತಿ ಪುತ್ರ ಯತೀಶ್ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಕನ್ನಡ 95,ಇಂಗ್ಲಿಷ್ 93, ಹಿಂದಿ 90, ವಿಜ್ಞಾನ94, ಗಣಿತ 97, ಸಮಾಜ 96 ಅಂಕ ಗಳಿಸಿದ್ದಾನೆ.ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲಾ ರಜಾ ದಿನದಲ್ಲಿ ಬಿ.ಸಿ.ರೋಡಿನ ಬಸ್ಸು ನಿಲ್ದಾಣದ ಬಳಿ ಇರುವ ಮತ್ಸ್ಯ ಸಾಗರ ಹೊಟೇಲ್ ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದಾನೆ. ಈ ಹಿಂದೆಯೂ ಶಾಲಾ ರಜಾ ದಿನಗಳಲ್ಲಿ ಕೆಟರಿಂಗ್ ಕೆಲಸಕ್ಕೆ ಹೋಗುತ್ತಿದ್ದೆ. ಯಾವುದೇ ಟ್ಯೂಷನ್ ಪಡೆಯದೆ ಶಿಕ್ಷಕರು ಹೇಳಿಕೊಟ್ಟದಷ್ಟನ್ನೆ ಕಲಿತು ಈ ಅಂಕ ಪಡೆದಿದ್ದೇನೆ ಎಂದು ಯತೀಶ್ ತಿಳಿಸಿದರು
ಸನ್ಮಾನ: ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಯತೀಶ್ ಸಾಧನೆಯನ್ನು ಗುರುತಿಸಿ ಬುಧವಾರ ಸಂಜೆ ಹೊಟೇಲ್ ಮಾಲಕ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ನಾರಾಯಣ ಪೆರ್ನೆ ಹೊಟೇಲ್ ನಲ್ಲಿ ಅಭಿನಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಟಿ. ಶೇಷಪ್ಪ ಮೂಲ್ಯ,ಪುರಸಭಾ ಸದಸ್ಯ ಹರಿಪ್ರಸಾದ್, ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್ ಹಾಗೂ ಹೊಟೇಲ್ ಸಿಬ್ಬಂದಿಗಳು ಹಾಜರಿದ್ದರು.