![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/01/DDFEA692-524A-47BF-B0BB-98B0193F4F67-1024x485.jpeg)
ಬಂಟ್ವಾಳ: ಇಲ್ಲಿನ ಪುರಸಭೆಯ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ ಸೋಮವಾರ ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮವಾದ ಬಜೆಟ್ ಮಂಡಿಸಲು ಸಾರ್ವಜನಿಕರ ಸಲಹೆ ಸೂಚನೆ ಅಗತ್ಯ ಎಂದು ತಿಳಿಸಿದರು. ಈ ಹಿಂದೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಯಾವುದಾದರೊಂದು ಸಲಹೆಯನ್ನು ಅನುಷ್ಠಾನಕ್ಕೆ ತಂದಿದ್ದೀರಾ? ಎಂದು ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಇದೇ ಪ್ರಥಮ ಭಾರಿಗೆ ಸಭೆಯಲ್ಲಿ ಭಾಗವಹಿಸಲು ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಸರಕಾರದ ಮಾರ್ಗದರ್ಶನದಂತೆ ಕಾಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದ ಅವರು ಮುಖ್ಯಾಧಿಕಾರಿಯ ಅನುಪಸ್ಥಿತಿಯಿಂದ ಆಕ್ರೋಶಗೊಂಡು ಸಭೆಯಿಂದ ಹೊರ ನಡೆದರು.
ಮೆಲ್ಕಾರ್ನಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ವಸಂತಿ ಗಂಗಾಧರ್ ಸಲಹೆ ನೀಡಿದರು. ಬಿ.ಸಿ.ರೋಡಿನಿಂದ ಕೈಕಂಬದವರೆಗೆ ರಸ್ತೆ ಬದಿಯಲ್ಲಿ ಪುಟ್ಪಾತ್ ಇಲ್ಲದೆ ಸಾರ್ವಜನಿರು ತೊಂದರೆ ಪಡುತ್ತಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಜೀವಹಾನಿಯೂ ಸಂಭವಿಸಿದೆ, ಆದ್ದರಿಂದ ಸೂಕ್ತ ಪುಟ್ಪಾತ್ ನಿರ್ಮಿಸುವಂತೆ ಪುರಸಭೆಯ ಸ್ವಚ್ಛತಾ ರಾಯಭಾರಿ ಡಾ. ತುಕರಾಂ ಪೂಜಾರಿ ಸಲಹೆ ನೀಡಿದರು. ಬಿ.ಸಿ.ರೋಡಿನಲ್ಲಿರುವ ಜೋಡುಮಾರ್ಗ ಉದ್ಯಾನವನವನ್ನು ಸುಸ್ಥಿತಿಗೆ ತಂದು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯ ಜನಾರ್ದನ ಚೆಂಡ್ತಿಮಾರ್ ಆಗ್ರಹಿಸಿದರು. ಪರಿಸರ ರಕ್ಷಣೆಗೆ ಪೂರಕವಾಗುವಂತೆ ಒಂದು ಗಿಡ ನೆಡುವ ಕೆಲಸ ಪುರಸಭೆಯಿಂದ ಆಗಿಲ್ಲ ಎಂದು ಆರೋಪಿಸಿದ ಜನಾರ್ದನ್ ಪುರಸಭೆ ವ್ಯಾಪ್ತಿಯಲ್ಲಿ ಕಸ ಎಸೆಯುವುದು ಬಡವರಲ್ಲ. ಶ್ರೀಮಂತರು ತಮ್ಮ ಕಾರಲ್ಲಿ ಬಂದು ಕಸ ಎಸೆಯುತ್ತಾರೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು. ಬಜೆಟ್ನಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಮನೆ ನಿವೇಶನಗಳನ್ನು ಹಂಚುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಆಗ್ರಹಿಸಿದರು. ಬಡ್ಡಕಟ್ಟೆಯಲ್ಲಿ ಮಾಂಸದ ಅಂಗಡಿ ಹಾಗೂ ಹೊಟೇಲ್ ತ್ಯಾಜ್ಯ ನದಿಗೆ ಹೋಗುತ್ತಿದ್ದು ಈ ಬಗ್ಗೆ ಕ್ರಮ ಜರಿಗಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಬಿ.ಸಿ.ರೋಡು ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಗೆ ಪುಟ್ಪಾತ್ ನಿರ್ಮಿಸಿ, ರಸ್ತೆ ಬದಿ ಮರಗಳನ್ನು ನೆಡಬೇಕು ಎಂದು ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ವಸಂತ್ ಬಾಳಿಗ ಸಲಹೆ ನೀಡಿದರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಸದಸ್ಯರಾದ ಗೋವಿಂದ ಪ್ರಭು, ಗಂಗಾಧರ್, ಜನಾರ್ದನ ಚೆಂಡ್ತಿಮಾರ್, ಸಿದ್ದೀಕ್ ಗುಡ್ಡೆಯಂಗಡಿ, ಝೀನತ್, ಸಂಶದ್ ಭಾನು, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಕಚೇರಿ ವ್ಯವಸ್ಥಾಪಕಿ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ, ಪ್ರಮುಖರಾದ ಡಾ. ತುಕರಾಂ ಪೂಜಾರಿ, ದಾಮೋದರ್ ಸಂಚಯಗಿರಿ, ವಸಂತಿ ಗಂಗಾಧರ್, ವಿಶ್ವನಾಥ ಚೆಂಡ್ತಿಮಾರ್, ಡಾ. ವಸಂತ ಬಾಳಿಗ ಹಾಗೂ ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿ ವಿವಿಧ ಸಲಹೆಗಳನ್ನು ನೀಡಿದರು
![](https://aksharanews.in/wp-content/uploads/2023/01/52F439FC-1786-4C20-9119-05B44ED3AFA9-1024x485.jpeg)
![](https://aksharanews.in/wp-content/uploads/2024/01/aksharanews-ad.jpg)