ಬಂಟ್ವಾಳ: ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರದ ವತಿಯಿಂದ ವೀರ ಪುರುಷರಾದ ಶ್ರೀ ಸತ್ಯಸಾರಮಾನಿ ಕಾನದ-ಕಟದರು ಬಾಳಿ-ಬದುಕಿ ಕಾರಣಿಕ ಮೆರೆದ ಪುಣ್ಯ ಭೂಮಿಯನ್ನು ಖರೀದಿಸುವ ಮತ್ತು ದೈವಸ್ಥಾನ ಜೀರ್ಣೋದ್ಧಾರದ ಸಲುವಾಗಿ ನಿವೇದನಾ ಪತ್ರದ ಬಿಡುಗಡೆ ಸಮಾರಂಭವು ಅ.೨೪ ರಂದು ಮೂಡಬಿದ್ರೆ ತಾಲೂಕಿನ ಬಡಗಮಿಜಾರು ಗ್ರಾಮದ ಅಲೇರಿಯಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಅಣ್ಣು ಖಂಡಿಗ ಕಕ್ಯಪದವು ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸಂಜೆ ಕರೆದ ಸುದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ನಮ್ಮ ನಡೆ ಅಲೇರಿ ಕಡೆಗೆ ಎನ್ನುವ ಸಮುದಾಯದ ಐಕ್ಯತಾ ಘೋಷವಾಕ್ಯದೊಂದಿಗೆ ಬಂಟ್ವಾಳ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಕಾನದ-ಕಟದ ಕುಲಬಾಂಧವರ ಸುಮಾರು ೬೫ಕ್ಕೂ ಹೆಚ್ಚಿನ ಗ್ರಾಮ ಸಮಿತಿಗಳನ್ನು ರಚಿಸಲಾಗಿದೆ. ಮೂಲಸ್ಥಾನದ ಪುಣ್ಯಭೂಮಿ ಖರೀದಿ ಹಾಗೂ ದೈವಸ್ಥಾನ ಜೀರ್ಣೋದ್ಧಾರ ಮಾಡುವ ಸಂಕಲ್ಪದೊಂದಿಗೆ ಒಟ್ಟು ೧೮.೨೮ ಎಕ್ರೆ ಭೂಮಿಯನ್ನು ಸುಮಾರು ೫.೫೦ಕೋಟಿ ರೂಪಾಯಿಗಳಿಗೆ ಖರೀದಿ ಮಾಡಲು ನಿರ್ಧರಿಸಲಾಗಿದೆ ಇದರ ಸಲುವಾಗಿ ಅಕ್ಟೊಬರ್ ೨೪ರಂದು ನಿವೇದನಾ ಪತ್ರ ಬಿಡುಗಡೆಯ ಸಮಾರಂಭ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರ ನೇತೃತ್ವದಲ್ಲಿ ಮೂಲಕ್ಷೇತ್ರದ ಅಧ್ಯಕ್ಷ ಶಿವರಾಜ್ ಪಿ.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಬಂಟ್ವಾಳ ತಾಲೂಕಿನಿಂದ 5 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲ ಗ್ರಾಮ ಸಮಿತಿಯ ಸದಸ್ಯರು ಬಿ.ಸಿ ರೋಡ್ ಸರ್ಕಲ್ ಬಳಿಗೆ ಬಂದು ನಮ್ಮ ನಡೆ ಆಲೇರಿ ಕಡೆಗೆ ಎನ್ನುವ ಸಂಕಲ್ಪದೊಂದಿಗೆ ಪುಣ್ಯಭೂಮಿ ಅಲೇರಿ ಕಡೆಗೆ ಪ್ರಯಾಣಿಸಲು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರ ಬಡಗಮಿಜಾರು ಇದರ ಗೌರವಾಧ್ಯಕ್ಷ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಅರ್ಬಿಗುಡ್ಡೆ, ಕೋಶಾಧಿಕಾರಿ ವೆಂಕಟೇಶ್ ಕೃಷ್ಣಾಪುರ, ಸಂಘಟಣಾ ಕಾರ್ಯದರ್ಶಿ ಸತೀಶ್ ಅರಳ, ಮಾಧವ ವಿ.ಎಸ್ ಕಡೇಶಿವಾಯ, ರಾಮ ಚೆಂಡ್ತಿಮಾರ್ ಹಾಗೂ ಹರಿಪ್ರಸಾದ್ ಕೃಷ್ಣಾಪುರ, ಉಪಸ್ಥಿತರಿದ್ದರು