ಬಂಟ್ವಾಳ: ಎಲೆಕ್ಟ್ರಾನಿಕ್ಸ್, ಫರ್ನಿಚರ್ಸ್ ಮತ್ತಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಸೇವಾ ಕ್ಷೇತ್ರದಲ್ಲಿ ಜನಪ್ರಿಯತೆ ಯನ್ನು ಪಡೆದುಕೊಂಡಿರುವ, ಕಲ್ಲಡ್ಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ನ ಎರಡನೇ ಶಾಖೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ಶುಭಾರಂಭಗೊಂಡಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲಿಸಿ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ವಿಜಯದಶಮಿಯ ಪರ್ವಕಾಲದಲ್ಲಿ ಸಂಭ್ರಮ ಎಲೆಕ್ಟ್ರಾನಿಕ್ಸ್ ತಲಪಾಡಿಯಲ್ಲಿ ಶುಭಾರಂಭಗೊಂಡಿರುವುದು ಸಂತಸದ ವಿಚಾರ. ಗೃಹೋಪಯೋಗಿ ವಸ್ತುಗಳು ಪ್ರತಿಯೊಬ್ಬರಿಗೂ ಅನಿವಾರ್ಯ. ಗಿರೀಶ್ ಮತ್ತವರ ತಂಡ ಕಲ್ಲಡ್ಕ ಪರಿಸರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಯನ್ನು ಮೂಡಿಸಿದೆ. ವ್ಯವಹಾರಸ್ಥರಿಗೆ ಗ್ರಾಹಕರೇ ದೇವರು, ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಅವರ ಬಾಯಿಮಾತಿನ ಪ್ರಚಾರವೇ ಹೆಚ್ಚು ಪರಿಣಾಮಕಾರಿಯಾದ್ದು . ಆ ನಿಟ್ಟಿನಲ್ಲಿ ಸಂಭ್ರಮ ಎಲೆಕ್ಟ್ರಾನಿಕ್ಸ್ ಉತ್ತಮ ಸೇವೆ ನೀಡಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಗಿರೀಶ್ ನೆಟ್ಲ ಮಾತನಾಡಿ ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಎರಡನೇ ಶಾಖೆಯನ್ನು ಆರಂಭಿಸುತ್ತಿದ್ದೇವೆ. ನ.22 ರವರೆಗೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ, ಉಚಿತ ಉಡುಗೊರೆ, ಉಚಿತ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮೇಜರ್ ಅಫ್ಲೈಯನ್ಸಸ್ ಲಿ.ನ ವಿತರಕ ಶಶಿಧರ ಶೆಟ್ಟಿ, ಎಲ್.ಜಿ. ಇಲೆಕ್ಟ್ರೋನಿಕ್ಸ್ ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಶ್ವನಿ ಕುಮಾರ್ ಸಿ, ಬ್ಯಾಂಕ್ ಆಫ್ ಬರೋಡದ ಕಲ್ಲಡ್ಕ ಶಾಖಾ ಪ್ರಬಂಧಕ ಪ್ರಣಮ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು. ಸಂಸ್ಥೆಯ ಪ್ರವರ್ತಕರ ಮಾತಪಿತರಾದ ಬಾಬು ಮೂಲ್ಯ ಹಾಗೂ ಭವಾನಿ ದಂಪತಿ ಉಪಸ್ಥಿತರಿದ್ದರು.
ನೂತನ ಮಳಿಗೆಯಲ್ಲಿ ಹೆಸರಾಂತ ಕಂಪೆನಿಗಳ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಗ್ರೈಂಡರ್, ಮೊಬೈಲ್, ಮಿಕ್ಸರ್ ಗ್ರೈಂಡರ್ ಸಹಿತ ಎಲ್ಲಾ ವಿಧದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಹೋಂ ಅಪ್ಲೈಯನ್ಸ್ ಸ್ ಗಳು, ಪಿಠೋಪಕರಣಗಳು ಒಂದೇ ಸೂರಿನಡಿ ಆಕರ್ಷಕ ದರದಲ್ಲಿ ಲಭ್ಯವಿದೆ.