ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರುವ ಭಕ್ತರ ಬ್ಯಾನರ್, ಫ್ಲೆಕ್ಸ್ಗಳನ್ನು ಸೋಮವಾರ ಪುರಸಭೆ ತೆರವುಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಯಿತು. ಮಾ.೧೩ರಂದು ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಎರಡು ದಿನಗಳವರೆಗೆ ತಾಳ್ಮೆ ವಹಿಸದೆ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪುರಸಭೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪುರಸಭೆ ಸಿಬ್ಬಂದಿ ಮತ್ತು ಭಕ್ತರ ಮಧ್ಯೆ ಕೆಲ ಸಮಯ ಮಾತಿನ ಚಕಮಕಿಯೂ ನಡೆಯಿತು. ಯಾವುದೇ ರಾಜಕೀಯ ಪ್ರಚಾರದ ಉದ್ದೇಶದಿಂದ ನಾವು ಬ್ಯಾನರ್ ಅಳವಡಿಸಿಲ್ಲ, ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಭಕ್ತಿಯ ನೆಲೆಯಾದ ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಇಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ ಇದನ್ನು ತೆರವುಮಾಡಬಾರದು ಎಂದು ಭಕ್ತಸಮುದಾಯ ಪುರಸಭೆ ಸಿಬ್ಬಂದಿಗೆ ತಿಳಿಸಿದರು. ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು. ಮಾತುಕತೆ ಸಂದರ್ಭ ವಿವಿಧ ಸಮುದಾಯಗಳ ಮುಖಂಡರು, ಪುರಸಭೆ ಸಿಬ್ಬಂದಿ ಹಾಜರಿದ್ದರು.