ಬಂಟ್ವಾಳ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಲಿತ ಯುವತಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಭಾರತೀಯ ಮಹಿಳಾ ಒಕ್ಕೂಟ (ಎನ್ಎಫ್ಐಡಬ್ಲ್ಯು) ಹಾಗೂ ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್)ನ ಜಂಟಿ ಆಶ್ರಯದಲ್ಲಿ ಶುಕ್ರವಾರ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿ ಮೋದಿ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಈ ದೇಶದ ದಲಿತ, ವಿದ್ಯಾರ್ಥಿ,ಯುವಜನ, ಮಹಿಳೆಯರಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರುವ ಆಶ್ವಾಸನೆಯೊಂದಿಗೆ ಪ್ರತಿ ಹೆಣ್ಣು ಮಗಳ ರಕ್ಷಣೆ ಮತ್ತು ಶಿಕ್ಷಣ ಪಡೆಯುವಂತಾಗಬೇಕು ಎಂಬ ಇರಾದೆಯೊಂದಿಗೆ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷಣೆ ನೀಡಿತ್ತು. ಆದರೆ ಅಧಿಕಾರ ಚುಕ್ಕಾಣಿ ಹಿಡಿದು 6 ವರ್ಷ ಕಳೆದಿದೆ. ಅದರೆ ಸರಕಾರದ ಘೋಷಣೆ ಈಡೇರುವ ಬದಲಾಗಿ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಹೆಣ್ಣು ನಡುರಾತ್ರಿ ಯಾವತ್ತು ನಿರ್ಭೀತಳಾಗಿ ಒಡಾಡುತ್ತಾಳೋ,ಆವತ್ತು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂಬುದು ರಾಷ್ಟ್ರಪಿತ ಮಹಾತ್ಮಾಗಾಂಧಿಯವರು ಪರಿಕಲ್ಪನೆ. ಆದರೆ ಇಂದು ರಾತ್ರಿ ಹೊತ್ತು ಬಿಡಿ ಹಗಲು ಕೂಡಾ ಒಂಟಿ ಹೆಣ್ಣು ನಡೆದಾಡಿಕೊಂಡು ಹೋಗಲು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರಕಾರದ ವೈಫಲ್ಯವೇ ಸರಿ ಎಂದು ಛೇಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಎಐವೈಎಫ್ ನ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ ಕೆ, ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿದರು. ಮಹಿಳಾ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ ವನಜಾಕ್ಷಿ ಬಿ.ಎಸ್, ಕೋಶಾಧಿಕಾರಿ ಸರಸ್ವತಿ ಕಡೇಶಿವಾಲಯ, ಕೇಶವತಿ, ಮಮತಾ, ಹಾಗೂ ಎಐವೈಎಫ್ ನ ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ತಾಲೂಕಿನ ನಾಯಕರಾದ ಸುಕೇಶ್ ಬಿಸಿರೋಡು, ಹರ್ಷಿತ್ ಸುವರ್ಣ ಬಂಟ್ವಾಳ, ಎಂ ಬಿ. ಭಾಸ್ಕರ, ಕಮಲಾಕ್ಷ ಭಂಡಾರಿ, ವಿದ್ಯಾರ್ಥಿ ನಾಯಕ ಹರ್ಷಿತ್ ರಾಜ್, ಕಾರ್ಮಿಕ ಮುಖಂಡ ಬಾಬು ಭಂಡಾರಿ ನೇತೃತ್ವ ವಹಿಸಿದ್ದರು. ಎಐವೈಎಫ್ ನ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.