ಬಂಟ್ವಾಳ: ಯುವಕರ ತಂಡವೊಂದು ಲಾಕ್ಡೌನ್ ಬಿಡುವಿನ ವೇಳೆಯನ್ನು ಬಾವಿ ನಿರ್ಮಾಣ ಮಾಡಲು ಬಳಸಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಂಡಿದೆ. ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ಭಜನಾ ಮಂದಿರ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮಂದಿರದ ಅವಶ್ಯಕತೆಗಾಗಿ ಬಾವಿ ನಿರ್ಮಿಸಲಾಗಿದೆ.
ಓಂಕಾರೇಶ್ವರೀ ಭಜನಾ ಮಂದರಕ್ಕೆ ಬಾವಿಯ ಅಗತ್ಯತೆಯನ್ನು ಮನಗಂಡು ಸ್ಥಳೀಯ ಉತ್ಸಾಹಿ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ಶ್ರಮದಾನದ ಮೂಲಕ ಬಾವಿ ತೋಡಲು ತೀರ್ಮಾನಿಸಿದ್ದರು. ಕಳೆದ ಎಪ್ರಿಲ್ 27 ರಂದು ೨೫ ಮಂದಿ ಯುವಕರ ತಂಡ ಬಾವಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಒಂದು ವಾರಗಳ ಕಾಲ ನಿರಂತರ ಬಾವಿ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸ್ಥಳೀಯ ಮನೆಯವರು ಬೆಳಿಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಿ ಸಹಕರಿಸಿದ್ದರು. ಯುವಕರ ಪ್ರಯತ್ನದ ಫಲವಾಗಿ ಬಾವಿಯಲ್ಲಿ ನೀರು ದೊರಕಿದ್ದು ಲಾಕ್ಡೌನ್ ಸಮಯವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡ ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.